
ಬೆಂಗಳೂರು: ಪಾಕ್ ವಿರುದ್ಧ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹಾಗೂ ಭಾರತ-ಪಾಕ್ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪತ್ರ ಬರೆದಿದ್ದಾರೆ.
ಪೆಹಲ್ಗಾಮ್ ದಾಳಿಯ ಬಳಿಕ, ಪ್ರಧಾನಿ ಮೋದಿ ವಿದೇಶದ ಪ್ರವಾಸ ರದ್ದುಗೊಳಿಸಿದ್ದು, ಸೌದಿ ಪ್ರವಾಸ ಮೊಟಕುಗೊಳಿಸಿದ್ದು ಸೇರಿದಂತೆ ಭಾರತ ಸರ್ಕಾರ ಕೈಗೊಂಡ ಜವಾಬ್ದಾರಿಯುತ ಕ್ರಮಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಕಳೆದ ಕೆಲವು ವಾರಗಳಿಂದ ಒತ್ತಡ ಹೆಚ್ಚಿದೆ. ಆದರೆ ಆ ಎಲ್ಲಾ ಒತ್ತಡ, ಸಂದರ್ಭಗಳನ್ನು ನಿಭಾಯಿಸಲು ನಿಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯಿಂದ ಸಾಧ್ಯವಾಗಿದೆ, ಉನ್ನತ ಜವಾಬ್ದಾರಿಯನ್ನು ಹೊಂದಿರುವಾಗ ಎಲ್ಲದರಿಂದ ದೂರವಿದ್ದು ಸಮಚಿತ್ತತೆ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ ಅದು ಅಧ್ಯಾತ್ಮದಿಂದಷ್ಟೇ ಸಾಧ್ಯ. ಕೆಲವು ದಿನಗಳಲ್ಲಿ ಆ ಶಕ್ತಿ ನಿಮ್ಮಲ್ಲಿ ಇದೆ ಎಂಬುದನ್ನು ನೀವು ತೋರಿಸಿದ್ದೀರಿ" ಎಂದು ದೇವೇಗೌಡ ಮೋದಿ ಅವರ ಗಟ್ಟಿ ನಿಲುವುಗಳನ್ನು ಶ್ಲಾಘಿಸಿದ್ದಾರೆ.
ನಾವು, ನಮ್ಮ ದೇಶ ಭಯೋತ್ಪಾದನೆಯೆಂಬ ಅಧರ್ಮದ ವಿರುದ್ಧ ಧರ್ಮ ಯುದ್ಧ ಸಾರಿರುವ ಸಂದರ್ಭದಲ್ಲಿ ಭಗವಂತ ನಿಮ್ಮೊಂದಿಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದೇವೇಗೌಡ ಮೋದಿಗೆ ಸಂದೇಶ ರವಾನಿಸಿದ್ದಾರೆ.
ಭಾರತ ಎಂದಿಗೂ ಶಾಂತಿಯ ಪರವಾಗಿರುತ್ತದೆ. ಆದರೆ ಅದನ್ನೇ ನಮ್ಮ ದೌರ್ಬಲ್ಯ ಎಂದು ಭಾವಿಸಿದವರಿಗೆ ನಮ್ಮ ಶಕ್ತಿಯ ಪರಿಚಯವಾಗಿದೆ. ನಾವು ಎದುರಿಸುವ ಸವಾಲುಗಳು ಇಲ್ಲಿಗೇ ಕೊನೆಯಾಗುವುದಿಲ್ಲ. ಆದರೆ ನಾವು ಇಡೀ ದೇಶವಾಗಿ ಒಗ್ಗಟ್ಟಿನಿಂದ ಇದ್ದೇವೆ ಎಂಬುದು ನಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ಒಟ್ಟಿಗೆ ಸವಾಲು ಎದುರಿಸುತ್ತೇವೆ. ನಾವು ಒಂದು ದೇಶವಾಗಿ ಒಟ್ಟಿಗೆ ನಿಲ್ಲುತ್ತೇವೆ ಎಂದು ದೇವೇಗೌಡ ಪ್ರಧಾನಿಗೆ ಪತ್ರದ ಮೂಲಕ ಸಂದೇಶ ರವಾನಿಸಿದ್ದಾರೆ. ದೇವೇಗೌಡರ ಪತ್ರಕ್ಕೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗತೊಡಗಿದೆ.
Advertisement