ಪ್ರಧಾನಿ ಮೋದಿ ಭಾಗವಹಿಸುವುದಾದರೆ ಮಾತ್ರ ಸರ್ವಪಕ್ಷ ಸಭೆ ಕರೆಯಿರಿ: ಕಪಿಲ್ ಸಿಬಲ್

ಭಾರತ ಮತ್ತು ಪಾಕಿಸ್ತಾನ ನಡುವಿನ ಐತಿಹಾಸಿಕ ಒಪ್ಪಂದವನ್ನು ಸುಗಮಗೊಳಿಸುವಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ನ್ನು ಸಿಬಲ್ ಉಲ್ಲೇಖಿಸಿದರು.
Kapil Sibal
ಕಪಿಲ್ ಸಿಬಲ್
Updated on

ನವದೆಹಲಿ: ಭಾರತ ಮತ್ತು ಪಾಕಿಸ್ತಾನಗಳು ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವುದಾಗಿ ಘೋಷಣೆ ಮಾಡಿಕೊಂಡ ನಂತರ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು, ಪ್ರಧಾನಿ ನರೇಂದ್ರ ಮೋದಿಯವರು ಸಭೆಯಲ್ಲಿ ಹಾಜರಾಗುವುದಾಗಿ ಸರ್ಕಾರ ಭರವಸೆ ನೀಡುವವರೆಗೆ ಬೇರೆ ರಾಜಕೀಯ ಪಕ್ಷಗಳು ಸಭೆಗೆ ಹಾಜರಾಗಬಾರದು ಎಂದು ರಾಜ್ಯಸಭೆ ಸದಸ್ಯ ಕಪಿಲ್ ಸಿಬಲ್ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಬಲ್, ಪ್ರಧಾನಿಯವರು ತಮ್ಮ ಉಪಸ್ಥಿತಿಯನ್ನು ಖಚಿತಪಡಿಸದ ಹೊರತು ಎಲ್ಲಾ ರಾಜಕೀಯ ಪಕ್ಷಗಳು ಸರ್ವಪಕ್ಷ ಸಭೆಗೆ ಹಾಜರಾಗಬಾರದು ಎಂದು ನಾನು ಒತ್ತಾಯಿಸುತ್ತೇನೆ. ಡಾ. ಮನಮೋಹನ್ ಸಿಂಗ್ ಇಂದು ಪ್ರಧಾನಿಯಾಗಿದ್ದರೆ, ಅವರು ಅಂತಹ ಸಭೆಯಲ್ಲಿ ಭಾಗವಹಿಸುತ್ತಿದ್ದರು. ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುತ್ತಿದ್ದರು ಎಂದರು,

ಭಾರತ ಮತ್ತು ಪಾಕಿಸ್ತಾನ ನಡುವಿನ ಐತಿಹಾಸಿಕ ಒಪ್ಪಂದವನ್ನು ಸುಗಮಗೊಳಿಸುವಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ನ್ನು ಸಿಬಲ್ ಉಲ್ಲೇಖಿಸಿದರು. 48 ಗಂಟೆಗಳ ಕಾಲ ಮಾತುಕತೆಗಳು ನಡೆಯುತ್ತಿವೆ ಮತ್ತು ತಟಸ್ಥ ಸ್ಥಳ ಸಭೆಯ ಬಗ್ಗೆ ಚರ್ಚಿಸಲಾಗಿದೆ ಎಂಬ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಹೇಳಿಕೆಗಳನ್ನು ಸಹ ಅವರು ಉಲ್ಲೇಖಿಸಿದರು.

ಭಾರತ-ಪಾಕಿಸ್ತಾನ ಏಕೆ, ಹೇಗೆ ಮತ್ತು ಯಾವ ಸಂದರ್ಭಗಳಲ್ಲಿ ಒಪ್ಪಂದಕ್ಕೆ ಬಂದವು ಎಂಬುದನ್ನು ನಮಗೆ ವಿವರಿಸಲಾಗಿಲ್ಲ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕೂಡ ಅಜಿತ್ ದೋವಲ್ ಅವರೊಂದಿಗೆ ಮಾತನಾಡಿದ್ದಾರೆ. ಏನಾಯಿತು ಎಂದು ತಿಳಿಯಲು ಇಡೀ ದೇಶದ ಜನರು ಕಾತರರಾಗಿದ್ದಾರೆ ಎಂದರು.

ನಾವು ಇಂದು ಸರ್ಕಾರ ವಿರುದ್ಧ ಯಾವುದೇ ಟೀಕೆಗಳನ್ನು ಮಾಡುವುದಿಲ್ಲ ಏಕೆಂದರೆ ಇದು ಟೀಕೆಗೆ ಸಮಯವಲ್ಲ. ನಾವು ವಿಶೇಷ ಸಂಸತ್ತಿನ ಅಧಿವೇಶನ ಮತ್ತು ಸರ್ವಪಕ್ಷ ಸಭೆಯನ್ನು ಕರೆಯಬೇಕೆಂದು ಮಾತ್ರ ಬಯಸುತ್ತೇವೆ. ಪ್ರಧಾನಿ ಕೂಡ ಸಭೆಯಲ್ಲಿ ಹಾಜರಿರುತ್ತಾರೆ ಎಂದು ಸರ್ಕಾರ ಭರವಸೆ ನೀಡುವವರೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗವಹಿಸಬಾರದು ಎಂದು ನಾನು ಮನವಿ ಮಾಡುತ್ತೇನೆ ಎಂದರು.

Kapil Sibal
'Operation Sindoor ಇನ್ನೂ ಮುಗಿದಿಲ್ಲ...': ಕದನ ವಿರಾಮ ಘೋಷಣೆ ಬೆನ್ನಲ್ಲೇ IAF ಮಹತ್ವದ ಹೇಳಿಕೆ!

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಡೆದ ಹಿಂದಿನ ಸರ್ವಪಕ್ಷ ಸಭೆಯಲ್ಲಿ ಮೋದಿ ಗೈರುಹಾಜರಾದ ಬಗ್ಗೆ ಸಿಬಲ್ ನಿರಾಶೆ ವ್ಯಕ್ತಪಡಿಸಿದರು. ಬಹುಶಃ ಅವರು ಬಿಹಾರ ಚುನಾವಣೆಗಳು ಹೆಚ್ಚು ಮುಖ್ಯವೆಂದು ಭಾವಿಸಿರಬಹುದು. ಅವರಿಗೆ ಬಾಲಿವುಡ್ ನವರ ಜೊತೆ ಮಾತನಾಡಲು ಕೇರಳಕ್ಕೆ ಹೋಗಲು ಸಮಯವಿತ್ತು, ಆದರೆ ದುರಂತ ಸಂಭವಿಸಿದಾಗ ಮಣಿಪುರದಂತಹ ಸ್ಥಳಗಳಿಗೆ ಭೇಟಿ ನೀಡುವುದು ಅಗತ್ಯವೆಂದು ಅವರು ಪರಿಗಣಿಸುವುದಿಲ್ಲ ಎಂದು ಟೀಕಿಸಿದರು.

ಇದೇ ಸಂದರ್ಭದಲ್ಲಿ ದೇಶದ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಸಿಬಲ್, ದೇಶವು ತನ್ನ ದೃಢಸಂಕಲ್ಪದಲ್ಲಿ ಒಗ್ಗಟ್ಟಿನಿಂದ ನಿಂತಿದೆ. ಭಾರತ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com