
ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 12 ವರ್ಷದ ಅವಳಿ ಮಕ್ಕಳಾದ ಉರ್ಬಾ ಫಾತಿಮಾ ಮತ್ತು ಝೈನ್ ಅಲಿ ಒಟ್ಟಿಗೆ ಜನಿಸಿದ್ದರು. ಆದರೆ ದುರ್ವಿಧಿ ಎಂದರೆ ಮೇ 7ರ ಬೆಳಿಗ್ಗೆ ಒಟ್ಟಿಗೆ ಸಾವನ್ನಪ್ಪಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ ನಾಲ್ವರ ಕುಟುಂಬ ಶೆಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಮತ್ತು ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ ಪಾಕಿಸ್ತಾನಿ ಪಡೆಗಳು ಹಾರಿಸಿದ ಶೆಲ್ ಅವರ ಮೇಲೆ ಬಿದ್ದು ಇಬ್ಬರು ಸಾವನ್ನಪ್ಪಿದ್ದರು.
ತಮ್ಮ ಅಲ್ಪಾವಧಿಯ ಜೀವನದ ಪ್ರತಿ ಕ್ಷಣವನ್ನು ಹಂಚಿಕೊಂಡಿದ್ದ ಅವಳಿಗಳು ಈಗ ಸ್ಮಶಾನದಲ್ಲಿ ಅಕ್ಕಪಕ್ಕದಲ್ಲಿ ಸಮಾಧಿಯಾಗಿದ್ದಾರೆ. ಪೂಂಚ್ ಪಟ್ಟಣದ ಡೊಂಗಾಸ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನಾಲ್ವರ ಕುಟುಂಬವಾದ ಉರ್ಬಾ, ಜೈನ್, ಅವರ ತಂದೆ ರಮೀಜ್ ಅಹ್ಮದ್ ಖಾನ್ ಮತ್ತು ಅವರ ತಾಯಿ ಉರ್ಷಾ ಖಾನ್. ಪಾಕ್ ನಿಂದ ಶೆಲ್ ದಾಳಿ ಶುರುವಾದಾಗ ಕುಟುಂಬದಲ್ಲಿ ಭಯ ಆವರಿಸಿತು. ವಿಶೇಷವಾಗಿ ಮಕ್ಕಳಲ್ಲಿ. ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಜೋರಾದ ಶಬ್ಧ ಮತ್ತು ಸ್ಫೋಟಗಳನ್ನು ಕೇಳಿದ ನಂತರ ಅವರು ಭಯಭೀತರಾಗಿದ್ದರು.
ಮಕ್ಕಳ ತಂದೆ ತಮ್ಮ ಸಂಬಂಧಿಕರಲ್ಲಿ ಒಬ್ಬರನ್ನು (ಭಾವ) ಕರೆದು ಅವರನ್ನು ಆ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕೇಳಿಕೊಂಡರು ಎಂದು ಅವರ ಚಿಕ್ಕಪ್ಪ ಅಲ್ತಾಫ್ ಅಹ್ಮದ್ ಹೇಳಿದರು. ಶೆಲ್ ದಾಳಿ ಇನ್ನೂ ನಡೆಯುತ್ತಿರುವಾಗ ಅವರ ಚಿಕ್ಕಪ್ಪ ಬೆಳಿಗ್ಗೆ 6.30ರ ಸುಮಾರಿಗೆ ಆ ಪ್ರದೇಶವನ್ನು ತಲುಪಿದರು. ತಾನು ಹೊರಗೆ ಕಾಯುತ್ತಿರುವುದಾಗಿ ಕುಟುಂಬಕ್ಕೆ ಕರೆ ಮಾಡಿ ಹೇಳಿದರು. ನಾಲ್ವರ ಕುಟುಂಬವು ತಮ್ಮ ಮನೆಯ ಮುಖ್ಯ ದ್ವಾರದಿಂದ ಹೊರಬಂದು ರಸ್ತೆಯ ಕಡೆಗೆ ಕೆಲವು ಹೆಜ್ಜೆಗಳನ್ನು ಇಡುತ್ತಿದ್ದಂತೆ, ಕನಿಷ್ಠ ಮೂರು ಶೆಲ್ಗಳು ಆ ಪ್ರದೇಶದಲ್ಲಿ ಬಿದ್ದವು. ಎರಡು ಶೆಲ್ಗಳು ನನ್ನ ಮನೆಗೆ ಬಡಿದು ಹಾನಿಗೊಳಗಾದವು, ಮತ್ತು ಇನ್ನೊಂದು ಹತ್ತಿರದ ಮನೆಗೆ ಬಡಿಯಿತು ಎಂದು ಅವರ ನೆರೆಯ ಮೆಹ್ತಾಬ್ ದಿನ್ ಶೇಖ್ ಹೇಳಿದರು.
ಶೆಲ್ ದಾಳಿ ಪ್ರಾರಂಭವಾದ ನಂತರ ತಮ್ಮ ಕುಟುಂಬವು ನೆಲ ಮಹಡಿಗೆ ಸ್ಥಳಾಂತರಗೊಂಡಿದ್ದರಿಂದ ಗಾಯಗಳೊಂದಿಗೆ ಪಾರಾಗಿದ್ದರೂ, ಆದರೆ ರಮೀಜ್ ಅಹ್ಮದ್ ಖಾನ್ ಕುಟುಂಬ ರಸ್ತೆಯಲ್ಲಿ ಇದ್ದಿದ್ದರಿಂದ ದಾಳಿಗೆ ಸಿಲುಕಿದರು. ದಾಳಿಯಲ್ಲಿ ಅವಳಿ ಮಕ್ಕಳಾದ ಉರ್ಬಾ ಮತ್ತು ಜೈನ್, ಅವರ ತಂದೆ ರಮೀಜ್ ಗಂಭೀರವಾಗಿ ಗಾಯಗೊಂಡರು. ಅವರನ್ನು ಕರೆದುಕೊಂಡು ಹೋಗಲು ಬಂದಿದ್ದ ಚಿಕ್ಕಪ್ಪ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದಿಂದ ಗಾಯಗೊಂಡ ಮಕ್ಕಳು ಮತ್ತು ಅವರ ತಂದೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು ಎಂದು ಅಲ್ತಾಫ್ ಹೇಳಿದರು.
ಆದರೆ ವಿಧಿಯಾಟ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಕ್ಕಳು ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದರು. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಮೀಜ್ ಅಹ್ಮದ್ ಖಾನ್ ಗೆ ಗಂಭೀರ ಗಾಯಗಳಾಗಿದ್ದು, ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಲ್ತಾಫ್ ಹೇಳಿದರು.
ರಮೀಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ, ಉರ್ಬಾ ಮತ್ತು ಜೈನ್ ಅವರನ್ನು ಪೂಂಚ್ನ ಮಂಡಿ ಪ್ರದೇಶದಲ್ಲಿರುವ ಅವರ ಪೂರ್ವಜರ ಸ್ಮಶಾನದಲ್ಲಿ ಅಕ್ಕಪಕ್ಕದಲ್ಲಿ ಸಮಾಧಿ ಮಾಡಲಾಯಿತು ಎಂದು ಅಲ್ತಾಫ್ ತಿಳಿಸಿದರು.
Advertisement