

ರಾಯ್ಪುರ: ಛತ್ತೀಸ್ಗಢದ ನವ ರಾಯ್ಪುರ ಅಟಲ್ ನಗರದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸಿದರು.
ಅದಕ್ಕೂ ಮುನ್ನ, ವಿಧಾನಸಭಾ ಸಂಕೀರ್ಣದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದರು.
ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಛತ್ತೀಸ್ಗಢ ವಿಧಾನಸಭಾ ಸ್ಪೀಕರ್ ರಮಣ್ ಸಿಂಗ್, ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಚರಣ್ ದಾಸ್ ಮಹಂತ್ ಅವರು ಇದ್ದರು.
2000 ದಲ್ಲಿ ಮಧ್ಯ ಪ್ರದೇಶ ಇಭ್ಭಾಗ ಮಾಡಿ ಛತ್ತೀಸ್ಗಢ ರಾಜ್ಯ ರಚನೆಯಾದ ನಂತರ ರಾಯ್ಪುರದ ಖಾಸಗಿ ಶಾಲೆಯನ್ನು ವಿಧಾನಸಭೆಯಾಗಿ ಮಾಡಿಕೊಳ್ಳಲಾಗಿತ್ತು. ಈಗ ತನ್ನದೇ ಆದ ಭವ್ಯ, ಆಧುನಿಕ ಮತ್ತು ಪರಿಸರ ಸ್ನೇಹಿ ನೂತನ ಕಟ್ಟಡಕ್ಕೆ ವಿಧಾನಸಭೆ ಸ್ಥಳಾಂತರಗೊಳ್ಳುತ್ತಿದೆ.
ನವ ರಾಯ್ಪುರದಲ್ಲಿ 51 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ವಿಧಾನಸಭೆ ಕಟ್ಟವನ್ನು 324 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಕೇವಲ ಒಂದು ಕಟ್ಟಡವಲ್ಲ, ಛತ್ತೀಸ್ಗಢದ ಸಾಂಸ್ಕೃತಿಕ ಗುರುತು ಮತ್ತು ಪ್ರಗತಿಪರ ಮನೋಭಾವದ ಸಂಕೇತವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೊಸ ವಿಧಾನಸಭೆ ಕಟ್ಟಡದ ವಾಸ್ತುಶಿಲ್ಪಿ ಸಂದೀಪ್ ಶ್ರೀವಾಸ್ತವ ಅವರು, ಪ್ರಸ್ತುತ ಮತ್ತು ಭವಿಷ್ಯದ ಅಗತ್ಯತೆಗಳು ಮತ್ತು ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
Advertisement