

ನವದೆಹಲಿ: ಮಾಜಿ ನ್ಯಾಯಾಧೀಶರು, ನಿವೃತ್ತ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ ಅಧಿಕಾರಿಗಳನ್ನು ಒಳಗೊಂಡ ನಾಗರಿಕರ ಗುಂಪೊಂದು, ಚುನಾವಣಾ ಆಯೋಗದ ಪರವಾಗಿ ಬಹಿರಂಗ ಪತ್ರ ಬರೆದಿದ್ದು, 'ವೋಟ್ ಚೋರಿ' ಆರೋಪ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಸಂವಿಧಾನಾತ್ಮಕ ಸಂಸ್ಥೆಗಳನ್ನು, ವಿಶೇಷವಾಗಿ ಭಾರತದ ಚುನಾವಣಾ ಆಯೋಗದ ಘನತೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರು "ನಂಬಲಾಗದಷ್ಟು ಅಸಭ್ಯ ವಾಕ್ಚಾತುರ್ಯ"ವನ್ನು ಬಳಸಿಕೊಂಡು "ಮತ ಕಳ್ಳತನ" ಆರೋಪ ಮಾಡಿ, ಚುನಾವಣಾ ಆಯೋಗದ ಮೇಲೆ ಪದೇ ಪದೇ ದಾಳಿ ನಡೆಸಿದ್ದಾರೆ ಎಂದು ಈ 272 ವ್ಯಕ್ತಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಆದರೂ, ಅಂತಹ ಕಟುವಾದ ಆರೋಪಗಳ ಹೊರತಾಗಿಯೂ, ಅವರು ಅಧಿಕಾರಿಗಳಿಗೆ "ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಬೆದರಿಕೆ ಹಾಕಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಅಧಿಕೃತ ದೂರು ಅಥವಾ ಪ್ರಮಾಣೀಕೃತ ಅಫಿಡವಿಟ್ ಅನ್ನು ಸಲ್ಲಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
"ರಾಹುಲ್ ಗಾಂಧಿ ಈ ನಡವಳಿಕೆಯ "ದುರ್ಬಲ ಕೋಪ"ವನ್ನು ಪ್ರತಿಬಿಂಬಿಸುತ್ತದೆ. ಜನರೊಂದಿಗೆ ಮರುಸಂಪರ್ಕಿಸಲು ಯಾವುದೇ ಕಾಂಕ್ರೀಟ್ ಯೋಜನೆಯಿಲ್ಲದೆ ಪುನರಾವರ್ತಿತ ಚುನಾವಣಾ ವೈಫಲ್ಯ ಮತ್ತು ಹತಾಶೆಯಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ" ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಧ್ಯಕ್ಷ ಆದರ್ಶ್ ಕುಮಾರ್ ಗೋಯೆಲ್, ಮಾಜಿ ನ್ಯಾಯಾಧೀಶರಾದ ಎಸ್ ಎನ್ ಧಿಂಗ್ರಾ, ಹೇಮಂತ್ ಗುಪ್ತಾ, ರಾಜೀವ್ ಲೋಚನ್, ಮಾಜಿ ರಾ ಮುಖ್ಯಸ್ಥ ಸಂಜೀವ್ ತ್ರಿಪಾಠಿ ಮತ್ತು ಮಾಜಿ ಎನ್ಐಎ ನಿರ್ದೇಶಕ ವೈ ಸಿ ಮೋಡ್ ಇತರರು ಸಹಿ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿರೋಧ ಪಕ್ಷಗಳು ಚುನಾವಣಾ ಫಲಿತಾಂಶ ತಮ್ಮ ಪರವಾಗಿಲ್ಲದಿದ್ದಾಗ ಮಾತ್ರ ಚುನಾವಣಾ ಆಯೋಗವನ್ನು ಟೀಕಿಸುತ್ತವೆ. ಇದು ಉದ್ದೇಶ ಪೂರ್ವಕ ಮತ್ತು "ಅವಕಾಶವಾದ" ಎಂದು ಗಣ್ಯರು ಹೇಳಿದ್ದಾರೆ.
ಈ ಪತ್ರವು ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಟಿ.ಎನ್. ಶೇಷನ್ ಮತ್ತು ಎನ್. ಗೋಪಾಲಸ್ವಾಮಿ ಅವರ ಪರಂಪರೆಯನ್ನು ಸ್ಮರಿಸಿದೆ. ಈ ನಾಯಕರು ಆಯೋಗದ ಅಧಿಕಾರವನ್ನು ನಿರ್ಭೀತಿ ಮತ್ತು ನಿಷ್ಪಕ್ಷಪಾತದಿಂದ ಎತ್ತಿಹಿಡಿದು ಅದನ್ನು "ಬಲಾಢ್ಯ ಸಾಂವಿಧಾನಿಕ ಕಾವಲುಗಾರನನ್ನಾಗಿ" ಮಾಡಿದ್ದರು ಎಂದು ಹೇಳಿದೆ.
ಸಹಿದಾರರು, ಚುನಾವಣಾ ಆಯೋಗವು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು, ಸಂಪೂರ್ಣ ದತ್ತಾಂಶವನ್ನು ಪ್ರಕಟಿಸಬೇಕು ಮತ್ತು ಅಗತ್ಯವಿದ್ದಾಗ ಕಾನೂನುಬದ್ಧವಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ರಾಜಕೀಯ ನಾಯಕರು ಆರೋಪಗಳ ಮೂಲಕವಲ್ಲ, ಬದಲಿಗೆ ನೀತಿಗಳ ಮೂಲಕ ಸ್ಪರ್ಧಿಸಬೇಕು ಮತ್ತು ಚುನಾವಣಾ ಫಲಿತಾಂಶಗಳನ್ನು ಪ್ರಬುದ್ಧತೆಯಿಂದ ಒಪ್ಪಿಕೊಳ್ಳಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ.
Advertisement