
ಭಾರತವು ಸ್ಪಷ್ಟ ಮತ್ತು ಸೀಮಿತ ಉದ್ದೇಶದೊಂದಿಗೆ ಆಪರೇಷನ್ ಸಿಂದೂರ್ ನ್ನು ಪ್ರಾರಂಭಿಸಿ ಆ ಗುರಿಗಳನ್ನು ಸಾಧಿಸಿದ ತಕ್ಷಣ ಕಾರ್ಯಾಚರಣೆಯನ್ನು ಕೊನೆಗೊಳಿಸಿತು ಎಂದು ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಹೇಳಿದ್ದಾರೆ.
93 ನೇ ವಾಯುಪಡೆ ದಿನದ ಸಂದರ್ಭದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಸಿಂಗ್, ನಾಲ್ಕು ದಿನಗಳ ಸಂಘರ್ಷದ ನಂತರ, ಇದು ಒಂದು ಪಾಠವಾಗಿ ನಿಲ್ಲುತ್ತದೆ. ಇದು ಇತಿಹಾಸದಲ್ಲಿ ಬಹಳ ಸ್ಪಷ್ಟವಾದ ಉದ್ದೇಶದಿಂದ ಪ್ರಾರಂಭವಾದ ಮತ್ತು ತ್ವರಿತವಾಗಿ ಕೊನೆಗೊಂಡ ಯುದ್ಧವಾಗಿ ಉಳಿಯುತ್ತದೆ.
ನಮ್ಮ ಉದ್ದೇಶಗಳನ್ನು ಸಾಧಿಸಿದ ಕಾರಣ ನಾವು ಒಂದು ರಾಷ್ಟ್ರವಾಗಿ ಯುದ್ಧವನ್ನು ನಿಲ್ಲಿಸಲು ಕರೆ ನೀಡಿದೆವು. ಉದ್ದೇಶ ಮುಗಿದ ಮೇಲೆ ನಾವು ಸಂಘರ್ಷವನ್ನು ಏಕೆ ಕೊನೆಗೊಳಿಸಬಾರದು ಏಕೆ ಮುಂದುವರಿಸಬೇಕು ಎನಿಸಿತು. ಪ್ರತಿಯೊಂದು ಸಂಘರ್ಷ ಅದಕ್ಕೆ ಪಾಠ ತೆರಬೇಕಾಗುತ್ತದೆ, ಜಗತ್ತು ಇಂದು ನಮ್ಮಿಂದ ಕಲಿಯಬೇಕಾದ್ದು ಸಾಕಷ್ಟಿದೆ ಎಂದರು.
ಸಂಘರ್ಷದ ಬಗ್ಗೆ ಪಾಕಿಸ್ತಾನದ ಆರೋಪ ತಿರಸ್ಕರಿಸಿದ ಭಾರತೀಯ ವಾಯುಪಡೆ ಮುಖ್ಯಸ್ಥರು, ಪಾಕಿಸ್ತಾನದ ಹೇಳಿಕೆಗಳು ಕಾಲ್ಪನಿಕವಾಗಿದೆ ಎಂದರು.
ಆದ ಹಾನಿಗಳೆಷ್ಟು?
ಭಾರತವು ಪಾಕಿಸ್ತಾನದ ಹೆಚ್ಚಿನ ಸಂಖ್ಯೆಯ ವಾಯುನೆಲೆಗಳು ಮತ್ತು ಸ್ಥಾಪನೆಗಳ ಮೇಲೆ ದಾಳಿ ಮಾಡಿತು. ಈ ದಾಳಿಗಳ ಪರಿಣಾಮವಾಗಿ, ಕನಿಷ್ಠ ನಾಲ್ಕು ಸ್ಥಳಗಳಲ್ಲಿನ ರಾಡಾರ್ಗಳು, ಎರಡು ತಾಣಗಳಲ್ಲಿನ ಕಮಾಂಡ್-ಅಂಡ್-ಕಂಟ್ರೋಲ್ ಕೇಂದ್ರಗಳು ಮತ್ತು ಎರಡು ವಾಯುನೆಲೆಗಳಲ್ಲಿನ ರನ್ವೇಗಳು ಹಾನಿಗೊಳಗಾದವು. ಹೆಚ್ಚುವರಿಯಾಗಿ, ವಿಭಿನ್ನ ನಿಲ್ದಾಣಗಳಲ್ಲಿನ ಮೂರು ಹ್ಯಾಂಗರ್ಗಳು ಸಹ ಹಾನಿಗೊಳಗಾದವು.
ಒಂದು ಸಿ-130 ವರ್ಗದ ಸಾರಿಗೆ ವಿಮಾನ ಮತ್ತು ಕನಿಷ್ಠ ನಾಲ್ಕರಿಂದ ಐದು ಯುದ್ಧ ವಿಮಾನಗಳು, ಹೆಚ್ಚಾಗಿ ಎಫ್-16 ಗಳು ನಾಶವಾದ ಸೂಚನೆಗಳು ಸಿಕ್ಕಿದವು. ಪಾಕಿಸ್ತಾನದ ವೈಮಾನಿಕ ಕಾರ್ಯಾಚರಣೆಗಳನ್ನು ದುರ್ಬಲಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ಭಾರತ ಇತ್ತೀಚೆಗೆ ಸೇರ್ಪಡೆಗೊಂಡ ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ವ್ಯವಸ್ಥೆಗಳನ್ನು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಸಿಂಗ್ ಶ್ಲಾಘಿಸಿದರು. ಈ ವ್ಯವಸ್ಥೆಗಳು ಹೆಚ್ಚಿನ ಮೌಲ್ಯದ ಶತ್ರು ಆಸ್ತಿಗಳನ್ನು ತಟಸ್ಥಗೊಳಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ ಎಂದರು.
ಮಾಧ್ಯಮಗಳ ಪಾತ್ರ
ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಮಾಧ್ಯಮ ಮುಖ್ಯ ಪಾತ್ರ ವಹಿಸಿತ್ತು. ನಮ್ಮ ಮಾಧ್ಯಮಗಳು ಯುದ್ಧದ ಸಮಯದಲ್ಲಿ ತಪ್ಪು ಮಾಹಿತಿಯ ಹರಡುವಿಕೆಯನ್ನು ಕಡಿಮೆ ಮಾಡಿದವು. ಮಾಧ್ಯಮಗಳು ಸಶಸ್ತ್ರ ಪಡೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿದವು ಎಂದರು.
Advertisement