ಕಳಂಕಿತ ಸಿಎಂ, ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ಕುರಿತ JPCಗೆ ಇಂಡಿಯಾ ಬಣ ಬಹಿಷ್ಕಾರ

ವಿರೋಧ ಪಕ್ಷಗಳು ಜೆಪಿಸಿಯನ್ನು ಬಹಿಷ್ಕರಿಸಲು ಸರ್ವಾನುಮತದಿಂದ ನಿರ್ಧರಿಸಿದ್ದು, ಇದನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Loksabha
ಲೋಕಸಭೆ
Updated on

ನವದೆಹಲಿ: ಗಂಭೀರ ಆರೋಪಗಳ ಮೇಲೆ ಸತತ 30 ದಿನಗಳವರೆಗೆ ಬಂಧನದಲ್ಲಿರುವ ಮುಖ್ಯಮಂತ್ರಿಗಳನ್ನು ಮತ್ತು ಸಚಿವರನ್ನು ಅವರ ಹುದ್ದೆಯಿಂದ ತೆಗೆದುಹಾಕುವ ಮೂರು ಮಸೂದೆಗಳ ಮೇಲಿನ ಸಂಸತ್ ಜಂಟಿ ಸಮಿತಿ(ಜೆಪಿಸಿ)ಯ ಭಾಗವಾಗಿರುವುದಿಲ್ಲ ಎಂದು ಕಾಂಗ್ರೆಸ್ ಸೋಮವಾರ ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ತಿಳಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿರೋಧ ಪಕ್ಷಗಳು ಜೆಪಿಸಿಯನ್ನು ಬಹಿಷ್ಕರಿಸಲು ಸರ್ವಾನುಮತದಿಂದ ನಿರ್ಧರಿಸಿದ್ದು, ಇದನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಇಡೀ ವಿರೋಧ ಪಕ್ಷವು ಜೆಪಿಸಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡದಿರಲು ನಿರ್ಧರಿಸಿದೆ ಎಂದು ಸೆಪ್ಟೆಂಬರ್ 14 ರಂದು ಟಿಎನ್‌ಐಇ ವರದಿ ಮಾಡಿತ್ತು.

Loksabha
Lok Sabha: PM, CM, ಸಚಿವರ ಬಂಧನವಾದರೆ ಪದಚ್ಯುತಿ ಮಸೂದೆ ಮಂಡನೆ: ಬಿಲ್ ಪ್ರತಿ ಹರಿದು ಅಮಿತ್ ಶಾ ಮೇಲೆ ಎಸೆದ ವಿಪಕ್ಷ ಸದಸ್ಯರು; Video

ಕನಿಷ್ಠ ಮೂರು ಪಕ್ಷಗಳು - ಟಿಎಂಸಿ, ಶಿವಸೇನೆ(ಯುಬಿಟಿ), ಮತ್ತು ಎಎಪಿ, ಸಂಸತ್ ಜಂಟಿ ಸಮಿತಿಯ ಭಾಗವಾಗಿರುವುದಿಲ್ಲ ಎಂದು ಈ ಹಿಂದೆ ಘೋಷಿಸಿದ್ದವು. ಅಲ್ಲದೆ ವಿರೋಧ ಪಕ್ಷಗಳು ಒಗ್ಗಟ್ಟಾಗಿರಬೇಕು ಎಂಬ ಅಭಿಪ್ರಾಯವನ್ನು ಬೆಂಬಲಿಸಲು ಸಮಿತಿಗೆ ಸೇರುವುದಿಲ್ಲ ಎಂದು ಎಸ್‌ಪಿ ಕೂಡ ಸುಳಿವು ನೀಡಿತ್ತು.

ಕಳೆದ ತಿಂಗಳು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮೂರು ಮಸೂದೆಗಳನ್ನು ಪರಿಶೀಲಿಸುವ ಸಂಸತ್ ಜಂಟಿ ಸಮಿತಿಯನ್ನು ಬಹಿಷ್ಕರಿಸುವ ಬಗ್ಗೆ ಯಾವುದೇ ರಾಜಕೀಯ ಪಕ್ಷ ತಮಗೆ ಪತ್ರ ಬರೆದಿಲ್ಲ ಎಂದು ಹೇಳಿದ್ದರು.

ಮಳೆಗಾಲದ ಅಧಿವೇಶನದ ಕೊನೆಯ ದಿನದಂದು, ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಈ ಮೂರು ಮಸೂದೆಗಳನ್ನು ಮಂಡಿಸಿದರು - ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ(ತಿದ್ದುಪಡಿ) ಮಸೂದೆ; ಸಂವಿಧಾನ(ನೂರ ಮೂವತ್ತನೇ ತಿದ್ದುಪಡಿ) ಮಸೂದೆ ಹಾಗೂ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com