
ನವದೆಹಲಿ: ಬಿಹಾರ ಎಸ್ಐಆರ್ ಪ್ರಕ್ರಿಯೆ "ನಿಖರವಾಗಿದೆ" ಎಂದು ವಾದಿಸಿದ ಭಾರತೀಯ ಚುನಾವಣಾ ಆಯೋಗ(ಇಸಿಐ), ಅರ್ಜಿದಾರರ ರಾಜಕೀಯ ಪಕ್ಷಗಳು ಮತ್ತು ಎನ್ಜಿಒಗಳು ಈ ಪ್ರಕ್ರಿಯೆಗೆ ಕಳಂಕ ತರಲು ಬಯಸುತ್ತಿವೆ ಮತ್ತು "ಸುಳ್ಳು ಆರೋಪಗಳನ್ನು" ಮಾಡುತ್ತಿವೆ ಎಂದು ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟವಾದಾಗಿನಿಂದ ಹೆಸರು ಡಿಲೀಟ್ ಮಾಡುವುದರ ವಿರುದ್ಧ ಯಾವುದೇ ಮತದಾರರು ಒಂದೇ ಒಂದು ಮೇಲ್ಮನವಿ ಸಲ್ಲಿಸಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ರ್ಯಾಲಿಗಳ ಕಾರಣದಿಂದಾಗಿ ರಾಜಕೀಯ ಪಕ್ಷಗಳು ವಿಚಾರಣೆಗೆ ಗೈರುಹಾಜರಾಗಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ನಂತರ ಸಿದ್ಧಪಡಿಸಲಾದ ಮತದಾರರ ಪಟ್ಟಿಯ ಅಂತಿಮ ಪಟ್ಟಿಯಲ್ಲಿ ಮುದ್ರಣ ದೋಷಗಳು ಮತ್ತು ಇತರ ತಪ್ಪುಗಳನ್ನು ಚುನಾವಣಾ ಆಯೋಗ ಜವಾಬ್ದಾರಿಯಿಂದ ಪರಿಶೀಲಿಸಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸುವುದಾಗಿ ಹೇಳಿದೆ.
ಬಿಹಾರ SIR ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ, ಅರ್ಜಿದಾರರು "ಹಿಡನ್ ಅಜೆಂಡಾ" ಹೊಂದಿದ್ದಾರೆ ಮತ್ತು ರಾಜಕೀಯ ಪಕ್ಷಗಳ ಚುನಾವಣಾ ಹಿತಾಸಕ್ತಿಗಾಗಿ ECI ಅನ್ನು ಅಪಖ್ಯಾತಿಗೊಳಿಸಲು SIR ಪ್ರಕ್ರಿಯೆ ಹಾಗೂ ಅಂತಿಮ ಮತದಾರರ ಪಟ್ಟಿ ವಿರುದ್ಧ "ಸುಳ್ಳು ಆರೋಪಗಳನ್ನು" ಮಾಡುತ್ತಿದ್ದಾರೆ ಎಂದು EC ಹೇಳಿದೆ.
Advertisement