
ಬಾಂಗ್ಲಾದೇಶಕ್ಕೆ ಭಾರತೀಯ ಸೇನಾ ಗುಪ್ತಚರ ಅಧಿಕಾರಿಗಳು ತೆರಳಿದ್ದು, ಸದ್ದಿಲ್ಲದೇ ಅಜೆಂಡಾ, ಸಭೆಗಳನ್ನು ಪೂರ್ಣಗೊಳಿಸಿ ಭಾರತಕ್ಕೆ ಮರಳಿದ್ದಾರೆ.
ಅತ್ತ ಭಾರತೀಯ ಸೇನಾ ಗುಪ್ತಚರ ಅಧಿಕಾರಿಗಳು ಬಾಂಗ್ಲಾದಿಂದ ವಾಪಸ್ಸಾಗಿದ್ದು ಬಾಂಗ್ಲಾದೇಶ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ಬಾಂಗ್ಲಾದೇಶ-ಭಾರತ ಗಡಿಗೆ ಹೊಂದಿಕೊಂಡಿರುವ ಎರಡು ಜಿಲ್ಲೆಗಳಲ್ಲಿರುವ ಎರಡು ಹಳೆಯ ವಾಯುನೆಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ.
ಭಾರತದ ಮೂವರು ಸಂದರ್ಶಕರಿಗೆ ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ, ಉಪ ಹೈಕಮಿಷನರ್ ಪವನ್ ಕುಮಾರ್ ಬಾಧೆ ಮತ್ತು ಇತರ ಅಧಿಕಾರಿಗಳು ಮಿಷನ್ನ ಬರಿಧಾರಾ ಸಂಕೀರ್ಣದಲ್ಲಿ ಭೋಜನ ಕೂಟವನ್ನು ಆಯೋಜಿಸಿದ್ದರು. ಬಾಂಗ್ಲಾಗೆ ಭೇಟಿ ನೀಡಿದ್ದ ಸೇನಾ ಗುಪ್ತಚರ ಅಧಿಕಾರಿಗಳು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಾಂಗ್ಲಾದೇಶದಲ್ಲಿ ತಮ್ಮ ವಾಸ್ತವ್ಯವನ್ನು ಒಂದು ದಿನದವರೆಗೆ ವಿಸ್ತರಿಸಿದರು. ಅವರು ಅಕ್ಟೋಬರ್ 16 ರಂದು ನವದೆಹಲಿಗೆ ಹಿಂತಿರುಗಬೇಕಿತ್ತು.
ಜನರಲ್ ಜಮಾನ್ ಮತ್ತು ಬಾಂಗ್ಲಾದೇಶ ಸೇನೆಯ ಅಧೀನ ಸಹೋದ್ಯೋಗಿಗಳ ತಂಡ ಮೂರು ಹೆಲಿಕಾಪ್ಟರ್ಗಳಲ್ಲಿ ಹಾರಾಟ ನಡೆಸಿ, ಮೊದಲು ಢಾಕಾದಿಂದ ಲಾಲ್ಮೋನಿರ್ಹತ್ಗೆ ಕರೆದೊಯ್ದರು. ನಂತರ ಠಾಕೂರ್ಗಾಂವ್ಗೆ ಪ್ರವಾಸ ಮಾಡಿದರು, ಅಲ್ಲಿ ಅವರು ಎರಡನೇ ಮಹಾಯುದ್ಧದ ಅವಧಿಯ ಎರಡು ವಾಯುನೆಲೆಗಳನ್ನು ಪರಿಶೀಲಿಸಿದರು. ಲಾಲ್ಮೋನಿರ್ಹತ್ ಮತ್ತು ಠಾಕೂರ್ಗಾಂವ್ ಭಾರತದ ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಜಿಲ್ಲೆಗಳಾಗಿವೆ.
ಅಕ್ಟೋಬರ್ 14 ರಂದು ಭಾರತೀಯ ತಂಡದ ಆಗಮನದ ಬಗ್ಗೆ ಬಾಂಗ್ಲಾದೇಶದಿಂದ ಗೊಂದಲಮಯ ಪ್ರತಿಕ್ರಿಯೆ ಬಂದಿತ್ತಾದರೂ ನಂತರದಲ್ಲಿ ಭಾರತೀಯ ತಂಡ ಬಾಂಗ್ಲಾದೇಶ ಸೇನೆಯ ಹಲವಾರು ಘಟಕಗಳು, ಸಶಸ್ತ್ರ ಪಡೆಗಳ ವಿಭಾಗದ ಕಾರ್ಯಾಚರಣೆ ಮತ್ತು ಯೋಜನೆ ಮತ್ತು ಗುಪ್ತಚರ ನಿರ್ದೇಶನಾಲಯಗಳು, ಪಡೆಗಳ ಗುಪ್ತಚರ ನಿರ್ದೇಶನಾಲಯ, ಸೇನಾ ವಿಮಾನಯಾನ ಗುಂಪು, ಅಡ್ಜುಟಂಟ್ ಜನರಲ್ ಮತ್ತು ಕ್ವಾರ್ಟರ್ ಮಾಸ್ಟರ್ ಜನರಲ್ ಶಾಖೆಗಳು ಮತ್ತು ಸೇನಾ ಸರಬರಾಜು ಘಟಕದೊಂದಿಗೆ ಸರಣಿ ಸಭೆಗಳನ್ನು ನಡೆಸಿತು.
ಭಾರತೀಯ ಸೇನೆಯಾಗಲಿ ಅಥವಾ ಬಾಂಗ್ಲಾದೇಶ ಸೇನೆಯಾಗಲಿ ಈ ಭೇಟಿಯ ಬಗ್ಗೆ ಹೆಚ್ಚು ಪ್ರಚಾರ ನೀಡಿಲ್ಲ. ಅಕ್ಟೋಬರ್ 14 ರಿಂದ ಪ್ರಾರಂಭವಾಗುವ ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ನಿರ್ಧರಿಸಲಾಗಿದ್ದ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ಜನರಲ್ ವಕರ್-ಉಜ್-ಜಮಾನ್ ಈ ಪ್ರವಾಸವನ್ನು ರದ್ದುಗೊಳಿಸಿದ್ದು ವಿಶೇಷವಾಗಿತ್ತು.
ಇದಕ್ಕೂ ಮೊದಲು, ಅಕ್ಟೋಬರ್ 14 ಮತ್ತು 16 ರ ನಡುವೆ ನಡೆಯಬೇಕಿದ್ದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಒಂದು ಮತ್ತು ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನಾ ನಿಗ್ರಹದ ಕುರಿತಾದ ಎರಡು ಸಮ್ಮೇಳನಗಳಲ್ಲಿ ಭಾಗವಹಿಸಲು ನವದೆಹಲಿಗೆ ಭೇಟಿ ನೀಡುವುದನ್ನು ಅವರು ರದ್ದುಗೊಳಿಸಿದ್ದರು.
ಅಕ್ಟೋಬರ್ 16 ರ ಮಧ್ಯಾಹ್ನ, ಬಾಂಗ್ಲಾದೇಶ ಸೇನೆಯ ಅಧೀನ ಅಧಿಕಾರಿಗಳ ಸ್ವಂತ ತಂಡದೊಂದಿಗೆ ಪ್ರಯಾಣಿಸುತ್ತಿದ್ದ ಜನರಲ್ ಜಮಾನ್, ಭಾರತದ 'ಚಿಕನ್ಸ್ ನೆಕ್' ಕಾರಿಡಾರ್ಗೆ ಹತ್ತಿರದಲ್ಲಿರುವ ಠಾಕೂರ್ಗಾಂವ್ನಲ್ಲಿರುವ ಕೈಬಿಟ್ಟ ವಾಯುನೆಲೆಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರತದ ಸೇನಾ ಗುಪ್ತಚರ ಅಧಿಕಾರಿಗಳು ಬಾಂಗ್ಲಾ ದೇಶದ ಸೇನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದು ಮ್ಯಾನ್ಮಾರ್, ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.
Advertisement