
ರಾಂಚಿ: ಜಾರ್ಖಂಡ್ನ ಆಡಳಿತಾರೂಢ ಜೆಎಂಎಂ ಸೋಮವಾರ ನೆರೆಯ ಬಿಹಾರ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದು, ತನ್ನ ಮಿತ್ರಪಕ್ಷಗಳಾದ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ನ 'ರಾಜಕೀಯ ಪಿತೂರಿ'ಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜೆಎಂಎಂ ಹಿರಿಯ ನಾಯಕಿ ಸುದಿವ್ಯ ಕುಮಾರ್, ಜಾರ್ಖಂಡ್ನಲ್ಲಿ ಕಾಂಗ್ರೆಸ್ ಮತ್ತು ಆರ್ಜೆಡಿ ಜೊತೆಗಿನ ಮೈತ್ರಿಯನ್ನು ತಮ್ಮ ಪಕ್ಷ ಪರಿಶೀಲಿಸುತ್ತಿದೆ ಮತ್ತು 'ನಂಬಿಕೆ ದ್ರೋಹಕ್ಕೆ'ಗೆ ಸೂಕ್ತ ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ.
ಹೇಮಂತ್ ಸೋರೆನ್ ನೇತೃತ್ವದ ಪಕ್ಷವು ಬಿಹಾರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮತ್ತು ಸೀಟು ಹಂಚಿಕೆ ಮಾತುಕತೆ ವಿಫಲವಾದ ಕಾರಣ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಎರಡು ದಿನಗಳ ಹಿಂದಷ್ಟೇ ಘೋಷಿಸಿತ್ತು. ಆದರೆ ಈಗ ಚುನಾವಣಾ ಕಣದಿಂದಲೇ ಹೊರಬಿದ್ದಿದೆ.
"ರಾಜಕೀಯ ಪಿತೂರಿಯ ಭಾಗವಾಗಿ ಜೆಎಂಎಂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆರ್ಜೆಡಿ ಮತ್ತು ಕಾಂಗ್ರೆಸ್ ತಡೆದಿವೆ. ಜೆಎಂಎಂ ಇದಕ್ಕೆ ಸೂಕ್ತ ಉತ್ತರ ನೀಡುತ್ತದೆ ಮತ್ತು ಆರ್ಜೆಡಿ ಹಾಗೂ ಕಾಂಗ್ರೆಸ್ ಜೊತೆಗಿನ ತನ್ನ ಮೈತ್ರಿಯನ್ನು ಪರಿಶೀಲಿಸುತ್ತದೆ" ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಕುಮಾರ್ ಹೇಳಿದ್ದಾರೆ.
ನವೆಂಬರ್ 11 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಚಕೈ, ಧಮ್ದಹಾ, ಕಟೋರಿಯಾ, ಮಣಿಹರಿ, ಜಮುಯಿ ಮತ್ತು ಪಿರ್ಪೈಂಟಿ ಸ್ಥಾನಗಳಿಗೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಜೆಎಂಎಂ ಶನಿವಾರ ಘೋಷಿಸಿತ್ತು.
ಈ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು.
Advertisement