
ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕಾಗಿ ನಾಳೆ ಚುನಾವಣೆ ನಡೆಯಲಿದ್ದು ಎನ್ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಬಿ, ಸುದರ್ಶನ್ ರೆಡ್ಡಿ ನಡುವೆ ಪೈಪೋಟಿ ನಡೆದಿದೆ. ಈ ಮಧ್ಯೆ ಬಿಆರ್ ಎಸ್ ಮತ್ತು ಬಿಜೆಡಿ ಪಕ್ಷಗಳು ಚುನಾವಣೆಯಿಂದ ದೂರ ಉಳಿಯುತ್ತಿರುವುದರಿಂದ ಸಂಖ್ಯಾಬಲದ ಆಧಾರದ ಮೇಲೆ ಎನ್ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ.
ರಾಜ್ಯದಲ್ಲಿ ಯೂರಿಯಾ ಕೊರತೆಯಿಂದಾಗಿ ತೆಲಂಗಾಣದ ರೈತರು ಅನುಭವಿಸುತ್ತಿರುವ ಸಮಸ್ಯೆಯನ್ನು ಎತ್ತಿ ತೋರಿಸುವ ಸಲುವಾಗ ತಮ್ಮ ಪಕ್ಷವು ಮತದಾನದಿಂದ ದೂರ ಉಳಿಯಲಿದೆ ಎಂದು ಬಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಕೆ ಟಿ ರಾಮರಾವ್ ತಿಳಿಸಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿ ಬಣ ಎರಡರಿಂದಲೂ 'ಸಮಾನ ಅಂತರವನ್ನು ಕಾಯ್ದುಕೊಳ್ಳುವ' ತನ್ನ ನೀತಿಯ ಭಾಗವಾಗಿ ಮತದಾನದಿಂದ ದೂರವಿರುವ ನಿರ್ಧಾರವನ್ನು ಬಿಜೆಡಿ ತಿಳಿಸಿದೆ. ಇದು ಎನ್ಡಿಎ ಅಭ್ಯರ್ಥಿಗೆ ವರವಾಗಲಿದೆ ಎನ್ನಲಾಗಿದೆ.
ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರು ಮತದಾನದ ಹಕ್ಕು ಹೊಂದಿದ್ದು ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಚುನಾವಣೆ ನಡೆಯಲಿದ್ದು ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ. ಜುಲೈ 21 ರಂದು ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಅವರು ಆರೋಗ್ಯದ ಕಾರಣ ನೀಡಿ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಉಪರಾಷ್ಟ್ರಪತಿ ಅವಧಿ ಮುಂದಿನ 5 ವರ್ಷಗಳ ಅವಧಿ ಇರಲಿದೆ. ಉಪರಾಷ್ಟ್ರಪತಿಯನ್ನು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತರು ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಇದರರ್ಥ ಸಂಸದರು ತಮ್ಮ ಇಚ್ಛೆಯಂತೆ ಮತ ಚಲಾಯಿಸಬಹುದು. ಹೆಚ್ಚಾಗಿ ಪಕ್ಷದ ಆಧಾರದ ಮೇಲೆ ಮತ ಚಲಾಯಿಸುತ್ತಾರೆ. ಆದಾಗ್ಯೂ, ಅಡ್ಡ ಮತದಾನವೂ ನಡೆಯುತ್ತದೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಬಿಜೆಪಿಯನ್ನು ಬೆಂಬಲಿಸುತ್ತಿದ್ದವು. ಈ ಬಾರಿ ಅವರ ಬೆಂಬಲ ಯಾರ ಕಡೆಗೆ ಎನ್ನುವುದು ಕುತೂಹಲ ಕೆರಳಿಸಿದೆ. 2022ರಲ್ಲಿ ಜಗದೀಪ್ ಧಂಖರ್ ಅವರು ಮೂರು ದಶಕಗಳಲ್ಲಿಯೇ ಅತಿ ದೊಡ್ಡ ಗೆಲುವು ಸಾಧಿಸಿದ್ದರು. ವೈಎಸ್ಆರ್ ಕಾಂಗ್ರೆಸ್ ಮತ್ತು ಆಗಿನ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳದ ಮತಗಳು ಮತ ಚಲಾಯಿಸಿದ್ದವು. ಆದರೆ ಈ ಬಾರಿ ಬಿಜೆಡಿ ಚುನಾವಣೆಯಿಂದ ದೂರ ಸರಿಯುತ್ತಿರುವುದು ಬಿಜೆಪಿಗೆ ಕೊಂಚ ಹಿನ್ನಡೆಯಾಗಲಿದೆ.
ಯಾರಿಗೆ ಎಷ್ಡು ಸಂಖ್ಯಾಬಲ:
ಪ್ರಸ್ತುತ ರಾಜ್ಯಸಭೆಯ 239 ಮತ್ತು 542 ಲೋಕಸಭಾ ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇದರ ಪ್ರಕಾರ ಮತದಾರರ ಸಂಖ್ಯೆ 781 ಮತ್ತು ಬಹುಮತಕ್ಕೆ 391 ಮತಗಳ ಅಗತ್ಯವಿದೆ. NDA 422 ಸಂಸದರನ್ನು ಹೊಂದಿದೆ. ಹೀಗಾಗಿ ಎನ್ ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರ ಗೆಲುವು ಸುಲಭ ಎಂದೇ ಹೇಳಲಾಗಿದೆ. ಇಂಡಿ ಮೈತ್ರಿಕೂಟ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು ವಿರೋದ ಪಕ್ಣಗಳ ಜೊತೆಗೆ ಎನ್ ಡಿಎ ಮಿತ್ರ ಪಕ್ಷದ ಸದಸ್ಯರ ಮತಗಳು ಲಭಿಸಲಿವೆ ಎನ್ನುವ ನಂಬಿಕೆ ಇಟ್ಡಿದೆ. ಇನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ 11 ಸಂಸದರನ್ನು ಹೊಂದಿದೆ. ರಾಜ್ಯಸಭೆಯಲ್ಲಿ ಏಳು ಮತ್ತು ಲೋಕಸಭೆಯಲ್ಲಿ ನಾಲ್ಕು ಸದಸ್ಯರನ್ನು ಹೊಂದಿದೆ.
Advertisement