
ನವದೆಹಲಿ: ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ನಡುವೆ, ಪಾಕಿಸ್ತಾನದೊಂದಿಗೆ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಆಡಲು ಭಾರತಕ್ಕೆ ಅವಕಾಶ ನೀಡಿದ್ದಕ್ಕಾಗಿ AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಭಾರತಕ್ಕೆ ಪಾಕಿಸ್ತಾನದೊಂದಿಗೆ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಆಡಲು ಅವಕಾಶ ನೀಡಿದೆ. 26 ಜನರ ಜೀವಗಳಿಗಿಂತ ಆರ್ಥಿಕ ಲಾಭವೇ ಮುಖ್ಯವೇ? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಉಗ್ರರು ಪಹಲ್ಗಾಮ್ನಲ್ಲಿ ನಮ್ಮ 26 ನಾಗರಿಕರರನ್ನು ಗುಂಡು ಹಾರಿಸಿ ಕೊಂದಿದ್ದರು.
ಇದಕ್ಕಾಗಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯ ಆಡಲು ನಿರಾಕರಿಸುವ ಅಧಿಕಾರ ನಿಮಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 26 ನಾಗರಿಕರ ಜೀವಕ್ಕಿಂತ ಈ ಪಂದ್ಯದ ಮೂಲಕ ಗಳಿಸುವ ಹಣ ಹೆಚ್ಚು ಮೌಲ್ಯಯುತವೇ? ಬಿಸಿಸಿಐ ಒಂದು ಕ್ರಿಕೆಟ್ ಪಂದ್ಯದಿಂದ ಎಷ್ಟು ಹಣ ಪಡೆಯುತ್ತದೆ? 2000 – 3000 ಕೋಟಿ ರೂ.? ನಮ್ಮ 26 ನಾಗರಿಕರ ಜೀವಕ್ಕಿಂತ ಇದು ಮುಖ್ಯವೇ? ನಾವು ಆ 26 ನಾಗರಿಕರ ಪರ ಅಂದು ನಿಂತಿದ್ದೆವು, ಇಂದು ನಾವು ಅವರೊಂದಿಗೆ ನಿಲ್ಲುತ್ತೇವೆ. ನಾಳೆಯೂ ಅವರೊಂದಿಗೆ ನಿಲ್ಲುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ, ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ನೀವು ಹೇಳಿದ್ದೀರಿ. ಇಂದು ಪಾಕಿಸ್ತಾನದೊಂದಿಗೆ ಪಂದ್ಯ ಆಡುವ ಮೂಲಕ ನೀವು ಯಾವ ಸಂದೇಶವನ್ನು ನೀಡಲು ಪ್ರಯತ್ನಿಸುತ್ತಿದ್ದೀರಿ? ಎಂದು ಕಿಡಿ ಕಾರಿದ್ದಾರೆ.
ಇಂದು ನಿಗದಿಯಾಗಿರುವ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸುವಂತೆ ಅನೇಕ ವಿರೋಧ ಪಕ್ಷದ ನಾಯಕರು ಕರೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ಅಭಿಷೇಕ್ ದತ್ ಭಾರತ ಆಟದಲ್ಲಿ ಭಾಗವಹಿಸುವುದನ್ನು ಟೀಕಿಸಿದ್ದಾರೆ. ಪಂದ್ಯವನ್ನು ರದ್ದುಗೊಳಿಸಬೇಕು. ಈ ಪಂದ್ಯದಲ್ಲಿ ಆಡುವ ನಿರ್ಧಾರವು ʻಭಯೋತ್ಪಾದನೆಯೊಂದಿಗೆ ಮಾತುಕತೆ ಇಲ್ಲʼ ಎಂಬ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Advertisement