

ಸಹರಾನ್ ಪುರ: ರಾಷ್ಟ್ರ ರಾಜಧಾನಿ ಮತ್ತು ಉತ್ತರಾಖಂಡ ನಡುವೆ ತ್ವರಿತ ಸಂಪರ್ಕ ಉದ್ದೇಶದ ದೆಹಲಿ-ಡೆಹ್ರಾಡೂನ್ ಎಕ್ಸ್ಪ್ರೆಸ್ವೇಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
ಉದ್ಘಾಟನೆಗೂ ಮುನ್ನಾ ಸಹರಾನ್ಪುರದ ಎತ್ತರದ ಪ್ರದೇಶದ ವನ್ಯಜೀವಿ ಮಾರ್ಗವನ್ನು ಪರಿಶೀಲಿಸಿದರು. ಬಳಿಕ ಜೈ ಮಾ ದಾತ್ ಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಹರಾನ್ಪುರದಲ್ಲಿ ರೋಡ್ಶೋ ನಡೆಸಿದ ಪ್ರಧಾನಿ ಡೆಹ್ರಾಡೂನ್ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಎಂದೂ ಕರೆಯಲ್ಪಡುವ 213 ಕಿಲೋಮೀಟರ್ ಉದ್ದದ ಎಕ್ಸ್ಪ್ರೆಸ್ವೇ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ಗಳನ್ನು ವ್ಯಾಪಿಸಿದ್ದು, 12,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆರು ಪಥದ, ಪ್ರವೇಶ-ನಿಯಂತ್ರಿತ ಹೆದ್ದಾರಿಯು ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಆರು ಗಂಟೆಗಳಿಂದ ಸುಮಾರು ಎರಡೂವರೆ ಗಂಟೆಗಳವರೆಗೆ ಕಡಿತಗೊಳಿಸುವ ನಿರೀಕ್ಷೆಯಿದೆ.
ಈ ಯೋಜನೆಯು ಹತ್ತು ಇಂಟರ್ಚೇಂಜ್ಗಳು, ಮೂರು ರೈಲ್ವೆ ಓವರ್ಬ್ರಿಡ್ಜ್ಗಳು, ನಾಲ್ಕು ಪ್ರಮುಖ ಸೇತುವೆಗಳು ಮತ್ತು ಹನ್ನೆರಡು ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿದೆ. ರಸ್ತೆ ಸುರಕ್ಷತೆ ಮತ್ತು ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಸಹ ಇದು ಹೊಂದಿದೆ.
ಈ ಎಕ್ಸ್ಪ್ರೆಸ್ವೇ ನಾಲ್ಕು ಟೋಲ್ ಪ್ಲಾಜಾಗಳನ್ನು ಒಳಗೊಂಡಿದೆ. ಸಾಮಾನ್ಯ ಬಳಕೆದಾರರಿಗೆ ಪ್ರಮಾಣಿತ ಟೋಲ್ ದರಗಳು ಅನ್ವಯವಾಗಿದ್ದರೂ, ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ಗಳನ್ನು ಹೊಂದಿರುವವರು ಎಲ್ಲಾ ನಾಲ್ಕು ಪ್ಲಾಜಾಗಳಲ್ಲಿ ಒಂದು ಬಾರಿ ಪ್ರಯಾಣಕ್ಕೆ ₹60 ಕ್ಕಿಂತ ಸ್ವಲ್ಪ ಹೆಚ್ಚು ಪಾವತಿಸುತ್ತಾರೆ.
ಮೂಲಸೌಕರ್ಯ ಬೆಳವಣಿಗೆಯಲ್ಲಿ ಈ ಎಕ್ಸ್ ಪ್ರೆಸ್ ವೇ ಒಂದು ಮೈಲಿಗಲ್ಲು ಎಂದು ರಾಜಕೀಯ ನಾಯಕರು ಬಣ್ಣಿಸಿದ್ದಾರೆ, ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವಲ್ಲಿ, ಪ್ರಯಾಣದ ಸಮಯವನ್ನು ಕಡಿಮೆ ಮಾಡುವಲ್ಲಿ ಮತ್ತು ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುವಲ್ಲಿ ಅದರ ಪಾತ್ರವನ್ನು ಹೈಲೇಟ್ ಮಾಡಿದ್ದಾರೆ.
Advertisement