

ಕೊಲ್ಕತಾ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸರ್ಕಾರದ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ಒಬ್ಬ ದೇಶದ್ರೋಹಿ, ವ್ಯಾಪಾರ ಒಪ್ಪಂದದ ವೇಳೆ ಯುಎಸ್ಗೆ ದೇಶ ಮಾರಾಟ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಂಗಾಳದ ಮಾಲ್ಡಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ಸಿಗೆ, ಬಿಜೆಪಿಯನ್ನು ಎದುರಿಸುವ ತಾಕತ್ ಇಲ್ಲ ಎಂದು ಹೇಳಿದ್ದಾರೆ. ಮಮತಾ ಅವರ ಪಾರ್ಟಿಯು, ಇಂಡಿಯಾ ಮೈತ್ರಿಕೂಟದ ಪಾಲುದಾರ ಪಾರ್ಟಿಯಾಗಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಷಿಂಗ್ಟನ್ನ ಒತ್ತಡಕ್ಕೆ ಮಣಿಯುವ ಮೂಲಕ ಭಾರತದ ಇಂಧನ ಭದ್ರತೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತವನ್ನು ಮಾರಿದ್ದು, ಇದರಿಂದ ಭಾರತದ ಕೃಷಿ ಕ್ಷೇತ್ರವು ನಾಶವಾಗಲಿದೆ. ಹೀಗಾಗಿ ಮೋದಿಯವರು ದೇಶಭಕ್ತ ಅಲ್ಲ, ದೇಶದ್ರೋಹಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುಖವನ್ನು ನೋಡಿದ್ದೀರಾ? ಕಣ್ಣಿಗೆ ಕಣ್ಣು ಕೊಟ್ಟು ಮಾತನಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಾನು ಅವರ ಕಣ್ಣು ನೋಡಿ ಮಾತನಾಡುತ್ತಿದ್ದರೆ, ಅವರು ನೆಲ ನೋಡಿ, ಅಥವಾ ಇನ್ನೆಲ್ಲೋ ನೋಡಿ ನನ್ನ ಬಳಿ ಮಾತನಾಡುತ್ತಿದ್ದಾರೆ. 56 ಇಂಚಿನ ಎದೆಯುಳ್ಳ ನರೇಂದ್ರ ಮೋದಿ, ದೇಶವನ್ನು ಮಾರಿ ಮಜಾ ನೋಡುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಅಮೆರಿಕಕ್ಕೆ ದೇಶದ ದತ್ತಾಂಶವನ್ನು ಬಿಟ್ಟುಕೊಟ್ಟಿದೆ ಎಂದು ಆರೋಪಿಸಿರುವ ಅವರು, ಇದರಿಂದ ರಾಷ್ಟ್ರೀಯ ಭದ್ರತೆಗೆ ತೀವ್ರ ಹಾನಿಯಾಗಿದೆ. ಸುಮಾರು 9.5 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ಖರೀದಿಸುವುದಾಗಿ ಕೇಂದ್ರ ಅಮೆರಿಕಕ್ಕೆ ಭರವಸೆ ನೀಡಿದೆ. ಒಂದು ವೇಳೆ ಅಮೆರಿಕದ ಸರಕುಗಳು ಸುನಾಮಿಯಂತೆ ಭಾರತಕ್ಕೆ ಪ್ರವೇಶಿಸಿದರೆ, ನಮ್ಮ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕಾರ್ಖಾನೆಗಳು ಮುಚ್ಚಲ್ಪಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Epstein ಫೈಲ್ ನಲ್ಲಿ ಪ್ರಧಾನಿ ಮೋದಿಯವರ ಎಲ್ಲಾ ಭವಿಷ್ಯ ಅಡಗಿದೆ. ಈ ಫೈಲಿನ ಕೀ ಬಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿಯಿದೆ. ಗೌತಂ ಅದಾನಿ ಕೇಸಿನ ಪ್ರಮುಖ ದಾಖಲೆಗಳು ಟ್ರಂಪ್ ಬಳಿಯಿದೆ, ಈ ಎಲ್ಲಾ ಸತ್ಯಗಳು ಹೊರಬಂದ ದಿನ, ಮೋದಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಸರ್ಕಾರ, ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ. ಇಲ್ಲಿನ ಮತದಾರರು ಬದಲಾವಣೆಗೆ ಮತವನ್ನು ಹಾಕಲೇಬೇಕು. ಕಾಂಗೆಸ್ಸಿನಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ರಾಹುಲ್ ಗಾಂಧಿ, ಚುನಾವಣಾ ಸಭೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
Advertisement