

ಕೊಯಮತ್ತೂರು: ಕೇರಳದ ಕೋಯಿಕ್ಕೋಡ್ ನಿಂದ ಸುಮಾರು 16 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಶುಕ್ರವಾರ ಸಂಜೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಾಲ್ಪರೈ ಘಾಟ್ ರಸ್ತೆಯಲ್ಲಿ ಪಲ್ಟಿಯಾಗಿ ಕಂದಕಕ್ಕೆ ಉರುಳಿದ್ದು, ಭೀಕರ ಅಪಘಾತದಲ್ಲಿ ಎಂಟು ಜನ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.
ವಾಲ್ಪರೈ ಘಾಟ್ ನ 13ನೇ ಹೇರ್ ಪಿನ್ ಬೆಂಡ್ (13ನೇ ಯು-ಟರ್ನ್ ಕರ್ವ್) ನಲ್ಲಿ ವ್ಯಾನ್ ಚಾಲಕನ ನಿಯಂತ್ರ ತಪ್ಪಿ ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲಿರುವ ಆಳವಾದ ಕಣಿವೆಗೆ ಬಿದ್ದಿದೆ ಎಂದು ವರದಿಯಾಗಿದೆ.
ಅಪಘಾತವನ್ನು ಕಣ್ಣಾರೆ ಕಂಡ ಸ್ಥಳೀಯರು, ವ್ಯಾನ್ 13ನೇ ಹೇರ್ ಪಿನ್ ಬೆಂಡ್ ನಿಂದ ಒಂಬತ್ತನೇ ಹೇರ್ ಪಿನ್ ಬೆಂಡ್ ಕ್ರಾಸಿಂಗ್ ಬಳಿ ಬಿದ್ದಿದೆ ಎಂದು ಹೇಳಿದ್ದಾರೆ.
ಜೀವಂತವಾಗಿ ಪತ್ತೆಯಾದ ನಾಲ್ವರನ್ನು ಪೊಲ್ಲಾಚಿಯಲ್ಲಿರುವ ಕೊಯಮತ್ತೂರು ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಅರಣ್ಯ ಇಲಾಖೆಯ ಬೆಂಬಲದೊಂದಿಗೆ ಇತರರಿಗಾಗಿ ಹುಡುಕಾಟ ಮುಂದುವರೆದಿದೆ.
ಗಾಯಾಳುಗಳ ನಿಖರ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ, ಆದರೆ ಹಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಮಾಹಿತಿ ಪಡೆದ ಪೊಲೀಸರು ಅಪಘಾತ ಸ್ಥಳಕ್ಕೆ ಧಾವಿಸಿ, ಅಪಘಾತದ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
Advertisement