

ತಮಿಳುನಾಡಿಗೆ ದ್ರೋಹ ಬಗೆಯಲು ಅಥವಾ ಅದರ ಅಭಿವೃದ್ಧಿಯನ್ನು ಅಡ್ಡಿಪಡಿಸಲು ಯತ್ನಿಸುವ ಯಾರಿಗಾದರೂ ತಾವು ಅಪಾಯಕಾರಿಯಾಗಿಯೇ ಉಳಿಯುತ್ತೇನೆ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗುಡುಗಿದ್ದಾರೆ. ಕ್ಷೇತ್ರ ಪುನರ್ವಿಭಜನೆ (Delimitation) ಮೂಲಕ ಕೇಂದ್ರ ಸರ್ಕಾರ ಪ್ರಗತಿಶೀಲ ರಾಜ್ಯಗಳನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದರು.
ಇಂದು ತಮಿಳು ನಾಡು ಚುನಾವಣೆಗೆ ಕೊನೆಯ ಸುತ್ತಿನ ಪ್ರಚಾರ ನಡೆಸಿದ ಸಿಎಂ ಎಂ ಕೆ ಸ್ಟಾಲಿನ್ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿದ ವೀಡಿಯೊ ಸಂದೇಶದಲ್ಲಿ, 2021ರ ವಿಧಾನಸಭಾ ಚುನಾವಣೆಯ ವೇಳೆ ತಮ್ಮನ್ನು “ಕಲೈನಾರ್ಗಿಂತ ಅಪಾಯಕರ” ಎಂದು ಕರೆದ ಟೀಕೆಯನ್ನು ಅವರು ಸ್ಮರಿಸಿದರು.
ಆ ಹೋಲಿಕೆಗೆ ಪ್ರತಿಕ್ರಿಯಿಸಿದ ಅವರು, ತಮ್ಮನ್ನು ತಾವು ಎಂ. ಕರುಣಾನಿಧಿಯವರ ಮಟ್ಟಕ್ಕೆ ಯಾವತ್ತೂ ಹೋಲಿಸಲಾಗುವುದಿಲ್ಲ ಎಂದು ಹೇಳಿದರು. ನಾನು ಅವರನ್ನು ತಂದೆ ಎಂದು ಕರೆಯುವುದಕ್ಕಿಂತ ಹೆಚ್ಚು ನಾಯಕ ಎಂದು ಕರೆಯುತ್ತಿದ್ದೆ. ಜನರು ಹೀಗೆ ಹೇಳುವಾಗ ಒಂದು ವಿಚಾರ ನನ್ನ ಮನಸ್ಸಿಗೆ ಬರುತ್ತದೆ—ತಮಿಳುನಾಡನ್ನು ಮೋಸಗೊಳಿಸಲು ಅಥವಾ ಅದರ ಬೆಳವಣಿಗೆಗೆ ಅಡ್ಡಿಯಾಗಲು ಯತ್ನಿಸುವವರಿಗೆ ನಾನು ಸದಾ ಅಪಾಯವಾಗಿಯೇ ಇರುತ್ತೇನೆ ಎಂದರು.
ತಮ್ಮ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ ಸ್ಟಾಲಿನ್, ಕಳೆದ ಐದು ವರ್ಷಗಳಲ್ಲಿ ಜನರ ವಿಶ್ವಾಸದಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವುದಕ್ಕೂ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕೂ ಸಾಧ್ಯವಾಯಿತು ಎಂದು ಹೇಳಿದರು.
ಸಾಮಾಜಿಕ ನ್ಯಾಯದೊಂದಿಗೆ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿ, ತಮಿಳುನಾಡಿನ ಆರ್ಥಿಕ ಬೆಳವಣಿಗೆ 11.19 ಶೇಕಡಕ್ಕೆ ತಲುಪಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.
ಕ್ಷೇತ್ರ ಪುನರ್ವಿಭಜನೆ ವಿಚಾರದಲ್ಲಿ ಕೇಂದ್ರದ ಕ್ರಮವನ್ನು ತೀವ್ರವಾಗಿ ಟೀಕಿಸಿದ ಅವರು, ಜನಸಂಖ್ಯೆ ನಿಯಂತ್ರಣ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿದ ತಮಿಳುನಾಡು ರಾಜ್ಯಗಳನ್ನು ಶಿಕ್ಷಿಸುವ ಉದ್ದೇಶದಿಂದ ಇದನ್ನು ತರಲಾಗಿದೆ ಎಂದು ಆರೋಪಿಸಿದರು.
ಡಿಎಂಕೆ ಪಕ್ಷ ಹಿಂದು ವಿರೋಧಿ ಎಂಬ ಆರೋಪಗಳನ್ನು ತಳ್ಳಿಹಾಕಿದ ಸ್ಟಾಲಿನ್, ದಶಕಗಳ ಕಾಲ ದ್ರಾವಿಡ ಪಕ್ಷಗಳು ಆಡಳಿತ ನಡೆಸಿದರೂ ತಮಿಳುನಾಡಿನಲ್ಲಿ ಭಾರತದಲ್ಲೇ ಅತಿ ಹೆಚ್ಚು ದೇವಾಲಯಗಳಿವೆ ಎಂದು ಹೇಳಿದರು.
ವಿಪಕ್ಷದ ಮೇಲೆ ಕಿಡಿಕಾರಿದ ಅವರು, ಎಐಎಡಿಎಂಕೆ ಬಿಜೆಪಿ ಪಕ್ಷಕ್ಕೆ ಅಧೀನವಾಗಿದೆ ಎಂದು ಆರೋಪಿಸಿದರು. ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ದೌರ್ಜನ್ಯ, ಅನ್ಯಾಯಗಳು ನಡೆಯುತ್ತವೆ ಎಂದು ಎಚ್ಚರಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಡಿಎಂಕೆ ಮತ್ತು ಅದರ ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮತದಾರರನ್ನು ಅವರು ಮನವಿ ಮಾಡಿದರು. ನಿಮ್ಮ ತಂದೆ, ಅಣ್ಣ, ತಮ್ಮ ಮತ್ತು ಸಹೋದರನಂತೆ, ಉತ್ತಮ ಆಡಳಿತ ಮುಂದುವರಿಯಲು ‘ರೈಸಿಂಗ್ ಸನ್’ ಚಿಹ್ನೆಗೂ ಹಾಗೂ ನಮ್ಮ ಸೆಕ್ಯುಲರ್ ಪ್ರೋಗ್ರೆಸಿವ್ ಅಲಯನ್ಸ್ ಅಭ್ಯರ್ಥಿಗಳ ಚಿಹ್ನೆಗಳಿಗೆ ಮತ ಹಾಕಿ ಎಂದು ಅವರು ಹೇಳಿದರು.
ಕಬ್ಬಿನ ಜ್ಯೂಸ್ ಕುಡಿದು ಆಟೋರಿಕ್ಷಾದಲ್ಲಿ ಸ್ಟಾಲಿನ್ ಪ್ರಚಾರ
ತಮಿಳುನಾಡು ವಿಧಾನಸಭಾ ಚುನಾವಣೆಯ ತೀವ್ರ ಪ್ರಚಾರ ಅಭಿಯಾನ ಇಂದು ಸಂಜೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆ ಮತದಾರರಿಗೆ ಎಂ ಕೆ ಸ್ಟಾಲಿನ್ ಅಂತಿಮ ಮನವಿ ಮಾಡಿದರು. ರಾಜ್ಯದ ಭವಿಷ್ಯವನ್ನು ಭದ್ರಗೊಳಿಸಲು ಡಿಎಂಕೆ ನೇತೃತ್ವದ ಮೈತ್ರಿಗೆ ಬೆಂಬಲ ನೀಡುವಂತೆ ಜನರನ್ನು ಅವರು ಕೋರಿದರು.
ಒಟ್ಟು 234 ಕ್ಷೇತ್ರಗಳಲ್ಲಿ 4,023 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಡಿಎಂಕೆ, ಎಐಎಡಿಎಂಕೆ, ನಾಮ್ ತಮಿಳರ್ ಕಚ್ಚಿ ಸೇರಿದಂತೆ ಇತರ ಪಕ್ಷಗಳ ನಡುವೆ ನಾಲ್ಕುಮುಖ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ. ರಾಜ್ಯದಾದ್ಯಂತ ತೀವ್ರ ಬಿಸಿಲು ಉಷ್ಣ ತಾಪಮಾನ ನಡುವೆ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ನಾಯಕರು ಮತ್ತು ಅಭ್ಯರ್ಥಿಗಳು ರ್ಯಾಲಿಗಳು, ರೋಡ್ಶೋಗಳು ಹಾಗೂ ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸುತ್ತಿದ್ದಾರೆ.
ಸ್ಟಾಲಿನ್ ಅವರು ರಾಜ್ಯದಾದ್ಯಂತ ವ್ಯಾಪಕ ಪ್ರವಾಸ ನಡೆಸಿ, ಪಕ್ಷದ ಅಭ್ಯರ್ಥಿಗಳು ಮತ್ತು ಮೈತ್ರಿ ಪಾಲುದಾರರಿಗೆ ಬೆಂಬಲ ಕೋರಿದ ಮೂಲಕ ಡಿಎಂಕೆಯ ಪ್ರಚಾರವನ್ನು ಮುನ್ನಡೆಸಿದ್ದಾರೆ.
Advertisement