

ಚಂಡೀಗಢ: ಕಾಂಗ್ರೆಸ್ ಹಾಗೂ ಶಿರೋಮಣಿ ಅಕಾಲಿ ದಳ (SAD) ಪಕ್ಷಗಳು ಆಮ್ ಆದ್ಮಿ ಪಕ್ಷ (AAP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಆಡಳಿತ ಪಕ್ಷದ ಅನೇಕ ಶಾಸಕರು ಮುಂದಿನ ದಿನಗಳಲ್ಲಿ ಪಕ್ಷ ತೊರೆದು ಹೋಗುವ ಸಾಧ್ಯತೆ ಇದೆ ಎಂದು ಆರೋಪಿಸಿವೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಆಪ್ನ ಏಳು ರಾಜ್ಯಸಭಾ ಸಂಸದರು ಬಿಜೆಪಿ ಸೇರುವುದರಿಂದ ಪಂಜಾಬ್ನಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ, ಅವರಿಗೆ ಪಂಜಾಬ್ ನಲ್ಲಿ ಯಾವುದೇ ನೆಲೆ ಇಲ್ಲ ಎಂದು ಹೇಳಿದ್ದಾರೆ.
ಇಂದು ಏಳು ಸಂಸದರು ಮಾತ್ರ ಹೊರಟಿದ್ದಾರೆ, ನಾಳೆ 50 ಶಾಸಕರು ಆಪ್ ತೊರೆಯಬಹುದು ಎಂದು ಹೇಳಿದ ಅವರು, ಆಪ್ ರಾಜ್ಯಸಭೆ ಮತ್ತು ವಿಧಾನಸಭಾ ಟಿಕೆಟ್ಗಳನ್ನು ಹಂಚಿದ ವಿಧಾನ ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.
ವಿಶೇಷವಾಗಿ ಮೇಲ್ಮನೆ ಸದಸ್ಯರ ಬಗ್ಗೆ ಉಲ್ಲೇಖಿಸಿದ ಅವರು, ಆಪ್ಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಿದ ದೊಡ್ಡ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಟಿಕೆಟ್ಗಳನ್ನು ನೀಡಲಾಗಿದೆ ಎಂದು ಹೇಳಿದರು.
7 ಸದಸ್ಯರು ಬಿಜೆಪಿ ಸೇರಿದ್ದಕ್ಕೆ ಆಪ್ ಅಚ್ಚರಿಪಡಬಾರದು. ಅವರು ಪಕ್ಷದ ತತ್ವಗಳಿಗೆ ಬದ್ಧರಾಗಿರಲಿಲ್ಲ; ವ್ಯವಹಾರ ಹಿತಾಸಕ್ತಿಗಾಗಿ ಮಾತ್ರ ಸೇರಿದ್ದರು ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಜ್ವಾ, ರಾಜ್ಯಸಭೆಯಲ್ಲಿ ಆಪ್ ಒಳಗಿನ ಬಿರುಕುಗಳು ಪಕ್ಷದ ನಿಜ ಸ್ವಭಾವವನ್ನು ಬಹಿರಂಗಪಡಿಸಿವೆ. ಇದು ತತ್ವಾಧಾರಿತ ಸಮಸ್ಯೆಯಲ್ಲ, ಪಂಜಾಬ್ ಸಂಪನ್ಮೂಲಗಳು ಮತ್ತು ಸಾರ್ವಜನಿಕ ಹಣದ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ಆರೋಪಿಸಿದರು.
ಹಿರಿಯ SAD ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ, ಆಪ್ನ ಏಳು ರಾಜ್ಯಸಭಾ ಸಂಸದರು ಬಿಜೆಪಿ ಸೇರುವ ಪ್ರಕ್ರಿಯೆ ಬಹುಕಾಲದಿಂದಲೇ ನಡೆಯುತ್ತಿತ್ತು, ಅನೇಕ ಆಪ್ ಶಾಸಕರು ಸಹ ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಿದರು.
ಆಪ್ ವ್ಯವಸ್ಥೆಯನ್ನು ಬದಲಾಯಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿತ್ತು, ಆದರೆ ತಾನೇ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಸಿಲುಕಿತು. ಮೊದಲಿಗೆ ಸ್ಥಾಪಕ ಸದಸ್ಯರು ಹೊರಟರು. ಈಗ ಸಂದೀಪ್ ಪಾಠಕ್ ಮತ್ತು ರಾಘವ್ ಚಡ್ಡಾ ಸೇರಿದಂತೆ ಪಂಜಾಬ್ನಲ್ಲಿ ಆಪ್ ನಿರ್ಮಿಸಿದ ನಾಯಕರು ಹಾಗೂ ಇನ್ನೂ ಐದು ಸಂಸದರು ಪಕ್ಷ ತೊರೆದಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಆಪ್ ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಿದರು. ಇದು ಜಲಂಧರ್ ಮತ್ತು ಲುಧಿಯಾನದಿಂದ ಪ್ರಾರಂಭವಾಗಬಹುದು. ಅಂತಿಮವಾಗಿ ಆಪ್ ಅಲ್ಪಮತ ಸರ್ಕಾರವಾಗಿ ಕುಸಿಯುವ ಪರಿಸ್ಥಿತಿ ಉಂಟಾಗಬಹುದು. ಮುಖ್ಯಮಂತ್ರಿಯಾದ ಭಗವಂತ್ ಮನ್ನ್ ಕೂಡ ತಮ್ಮ ಅಕ್ರಮ ಸಂಪತ್ತನ್ನು ರಕ್ಷಿಸಲು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದರು.
ಭಾರತೀಯ ಜನತಾ ಪಕ್ಷದ ಪಂಜಾಬ್ ಅಧ್ಯಕ್ಷ ಸುನಿಲ್ ಜಾಖರ್, ಆಪ್ ತೊರೆದು ಬಿಜೆಪಿ ಸೇರಿದ ರಾಜ್ಯಸಭಾ ಸದಸ್ಯರನ್ನು ಸ್ವಾಗತಿಸಿ, ಇದು ಪಂಜಾಬ್ನಲ್ಲಿ ಪಕ್ಷವನ್ನು ಬಲಪಡಿಸುವುದಷ್ಟೇ ಅಲ್ಲ, ಆಪ್ ಕುಸಿತದ ಆರಂಭವೂ ಆಗಲಿದೆ ಎಂದು ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ಅವರು, ಮುಳುಗುತ್ತಿರುವ ಆಪ್ ಹಡಗನ್ನು ಸಮಯಕ್ಕೆ ಸರಿಯಾಗಿ ಬಿಟ್ಟು ಬಿಜೆಪಿ ಸೇರಿದ ಎಲ್ಲಾ ಸಂಸದರಿಗೆ ಹಾರ್ದಿಕ ಸ್ವಾಗತ. ಆಪ್ ಆಡಳಿತದ ದುರ್ಬಲತೆ, ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಕೊರತೆಯಿಂದ ಪಂಜಾಬ್ ಜನರು ನಿರಾಶರಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯನ್ನು ತ್ಯಜಿಸಿದ ನಂತರ, ಪಕ್ಷದೊಳಗಿನ ಉತ್ತಮ ವ್ಯಕ್ತಿಗಳೂ ಈಗ ಹೊರಹೋಗಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಬರೆದಿದ್ದಾರೆ. ಗ್ಯಾಂಗ್ ಸಂಸ್ಕೃತಿ ಮತ್ತು ಮಾದಕ ವಸ್ತುಗಳು ಯುವಕರನ್ನು ಹಾಳು ಮಾಡುತ್ತಿವೆ ಎಂದರು.
ಆಪ್ನ ‘ರಿಮೋಟ್ ಕಂಟ್ರೋಲ್’ ವ್ಯವಸ್ಥೆಯಿಂದ ಸಮರ್ಥ ವ್ಯಕ್ತಿಗಳು ಕಾರ್ಯನಿರ್ವಹಿಸಲು ಅವಕಾಶ ಸಿಗುವುದಿಲ್ಲ, ಎಲ್ಲಾ ಅಧಿಕಾರ ಕೇಂದ್ರಿಕೃತವಾಗಿದೆ ಎಂದು ಅವರು ಆರೋಪಿಸಿದರು.
Advertisement