

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಕೊನೆಯ ಹಂತದ ಚುನಾವಣೆಯ ವೇಳೆ ತಮ್ಮ ಕ್ಷೇತ್ರ ವಾರಾಣಸಿಗೆ ಎರಡು ದಿನಗಳ ಭೇಟಿ ಕೈಗೊಂಡಿದ್ದು, ಇಂದು ಎರಡನೇ ದಿನದಂದು ರೋಡ್ಶೋ ನಡೆಸಿದ್ದಾರೆ. ಅವರು ಸಂಚರಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಜನಸ್ತೋಮ ಸೇರಿತ್ತು.
ಪ್ರಧಾನ ಮಂತ್ರಿಯವರ ರೋಡ್ ಶೋ ಬನಾರಸ್ ಲೋಕೋಮೋಟಿವ್ ವರ್ಕ್ಸ್ (blw) ಯಿಂದ ಆರಂಭಗೊಂಡಿದ್ದು, ಲಹರ್ತಾರಾ, ಕಚಹರಿ, ಅಂಬೇಡ್ಕರ್ ಚೌರಾಹಾ, ಚೌಕಾಘಾಟ್, ತೆಲಿಯಾಬಾಗ್, ಲಹುರಾಬೀರ್ ಮತ್ತು ಮೈದಾಗಿನ್ ಮೂಲಕ ಸಾಗುತ್ತಾ ಅಂತಿಮವಾಗಿ ಕಾಶಿ ವಿಶ್ವನಾಥ ದೇಗುಲದಲ್ಲಿ ಕೊನೆಗೊಂಡಿತು. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪೂಜೆ ಕೈಂಕರ್ಯ ಕೈಗೊಂಡ ಪ್ರಧಾನ ಮಂತ್ರಿಗಳು ತ್ರಿಶೂಲ ಹಿಡಿದು ಡಮರು ನುಡಿಸಿದರು. ಇದರ ಫೋಟೋ -ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಧಾನಿ ಭೇಟಿಯ ಸಂದರ್ಭದಲ್ಲಿ ವಾರಾಣಸಿ ಕ್ಷೇತ್ರದ ನಿವಾಸಿಗಳು ಮತ್ತು ಪಕ್ಷದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರಧಾನಮಂತ್ರಿಯನ್ನು ಸ್ವಾಗತಿಸಿದರು. “ಹರ್ ಹರ್ ಮಹಾದೇವ್” ಮತ್ತು “ಜೈ ಶ್ರೀ ರಾಮ್” ಎಂಬ ಘೋಷಣೆಗಳನ್ನು ಕೂಗುತ್ತಾ, ಮೋದಿ ಅವರಿಗೆ ಕೈಬೀಸಿ ನಮಸ್ಕಾರ ಮಾಡುವ ಮೂಲಕ ಸ್ವಾಗತಿಸಿದರು.
ಸುಮಾರು 14 ಕಿಮೀ ಮಾರ್ಗದಲ್ಲಿ ಹಲವು ಸ್ವಾಗತ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯರು ಗುಲಾಬಿ ಹೂವುಗಳ ಮಳೆಯೊಂದಿಗೆ, ಡೊಳ್ಳು-ನಾದ ಮತ್ತು ಶಂಖನಾದಗಳೊಂದಿಗೆ ಸ್ವಾಗತಿಸಿದರು. ಈ ರೋಡ್ಶೋ ನಗರದಲ್ಲಿ ನಡೆದ ಅತಿ ದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಅವರಿಗೆ ಡಮರುಗ ನುಡಿಸುವ ಮೂಲಕ ಸ್ವಾಗತ ದೊರೆಯಿತು.
ಇದಾದ ನಂತರ, ಪ್ರಧಾನಮಂತ್ರಿಗಳು 594 ಕಿಮೀ ಉದ್ದದ Ganga Expressway ನ್ನು ಉದ್ಘಾಟಿಸಲಿದ್ದಾರೆ. ಇದು ಮೇರಠ್ ಮತ್ತು ಪ್ರಯಾಗರಾಜ್ ನಗರಗಳನ್ನು ಸಂಪರ್ಕಿಸುವ ಪ್ರಮುಖ ಮೂಲಸೌಕರ್ಯ ಯೋಜನೆಯಾಗಿದೆ.
ಈ ವೇಗದ ಮಾರ್ಗವು ಉತ್ತರ ಪ್ರದೇಶದ ಸಂಪರ್ಕವನ್ನು ಹೆಚ್ಚಿಸುವುದರ ಜೊತೆಗೆ ಕೈಗಾರಿಕಾ ಹೂಡಿಕೆ, ಲಾಜಿಸ್ಟಿಕ್ಸ್, ಕೃಷಿ ಮಾರುಕಟ್ಟೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಯೋಜನೆ ರಾಜ್ಯದ ಅಭಿವೃದ್ಧಿಗೆ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ಹೇಳಿದ್ದಾರೆ. ಈ ಎಕ್ಸ್ಪ್ರೆಸ್ವೇ ಗ್ರಾಮಗಳು, ರೈತರು, ಉದ್ಯಮಿಗಳು ಮತ್ತು ಯುವಕರನ್ನು ಸಂಪರ್ಕಿಸುವ ಜೀವನಾಡಿ ಎಂದು ವಿವರಿಸಿದ್ದಾರೆ.
ಅಧಿಕೃತ ಮಾಹಿತಿಯ ಪ್ರಕಾರ, ಪ್ರಧಾನಮಂತ್ರಿ ಹರ್ಡೋಯಿಯಲ್ಲಿ, ಎಕ್ಸ್ಪ್ರೆಸ್ವೇ ಉದ್ಘಾಟನೆ, ಉತ್ತರ ಪ್ರದೇಶ ಎಕ್ಸ್ ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಪ್ರದರ್ಶನ ವೀಕ್ಷಣೆ, ಗಿಡ ನೆಡುವ ಕಾರ್ಯಕ್ರಮ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಈ ಎಕ್ಸ್ಪ್ರೆಸ್ವೇ ಮೇರಠ್, ಹಾಪುರ್, ಬುಲಂದ್ಶಹರ್, ಅಮ್ರೋಹಾ, ಸಂಭಲ್, ಬದೌನ್, ಶಾಹಜಹಾಂಪುರ, ಹರ್ಡೋಯಿ, ಉನ್ನಾವೋ, ರಾಯ್ ಬರೇಲಿ, ಪ್ರತಾಪಗಢ ಮತ್ತು ಪ್ರಯಾಗರಾಜ್ ಸೇರಿ ಒಟ್ಟು 12 ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಇದು ಪ್ರಯಾಣದ ಸಮಯವನ್ನು ಕಡಿಮೆ ಮಾಡಿ, ವೇಗವಾದ ಮತ್ತು ಸುರಕ್ಷಿತ ಸಂಚಾರಕ್ಕೆ ನೆರವಾಗಲಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ನಿರ್ಮಿಸಲಾದ ಈ ಆರು ಮಾರ್ಗದ ಎಕ್ಸ್ಪ್ರೆಸ್ವೇ 120 ಕಿಮೀ ವೇಗದವರೆಗೆ ವಿನ್ಯಾಸಗೊಳಿಸಲಾಗಿದ್ದು, ಭವಿಷ್ಯದಲ್ಲಿ ಎಂಟು ಮಾರ್ಗಗಳಿಗೆ ವಿಸ್ತರಿಸುವ ವ್ಯವಸ್ಥೆಯೂ ಇದೆ.
ಈ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ ಶಾಹಜಹಾಂಪುರ ಬಳಿ 3.2 ಕಿಮೀ ಉದ್ದದ ಏರ್ಸ್ಟ್ರಿಪ್ ನಿರ್ಮಾಣ, ಇದರಿಂದ ತುರ್ತು ಪರಿಸ್ಥಿತಿಯಲ್ಲಿ ವಾಯುಪಡೆಯ ವಿಮಾನಗಳು ಲ್ಯಾಂಡ್ ಆಗಬಹುದು. ಜೊತೆಗೆ, ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS), ಸಿಸಿಟಿವಿ ನಿಗಾ, ತುರ್ತು ಕರೆ ವ್ಯವಸ್ಥೆ, ಆಂಬುಲೆನ್ಸ್ ಮತ್ತು ಪೆಟ್ರೋಲಿಂಗ್ ಘಟಕಗಳನ್ನೂ ಹೊಂದಿದೆ.
ಮಾರ್ಗದಾಚೆ ಇಂಟಿಗ್ರೇಟೆಡ್ ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಲಾಜಿಸ್ಟಿಕ್ಸ್ ಕ್ಲಸ್ಟರ್ಗಳು (IMLCs) ನಿರ್ಮಿಸಲಾಗುತ್ತಿದ್ದು, ಗೋದಾಮುಗಳು, ಶೀತಗೃಹಗಳು ಮತ್ತು ಆಹಾರ ಸಂಸ್ಕರಣಾ ಕೇಂದ್ರಗಳು ಹೂಡಿಕೆ ಆಕರ್ಷಿಸಿ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿವೆ.
ಈ ಎಕ್ಸ್ಪ್ರೆಸ್ವೇವನ್ನು ಪುರವಾಂಚಲ್, ಆಗ್ರಾ-ಲಖ್ನೌ, ಬುಂದೇಲ್ಖಂಡ್ ಮತ್ತು ಗೋರಖ್ಪುರ್ ಲಿಂಕ್ ಎಕ್ಸ್ಪ್ರೆಸ್ವೇಗಳೊಂದಿಗೆ ಸಂಪರ್ಕಿಸಲಾಗುತ್ತದೆ, ಇದರಿಂದ ರಾಜ್ಯದಾದ್ಯಂತ ದೊಡ್ಡ ಸಾರಿಗೆ ಜಾಲ ನಿರ್ಮಾಣವಾಗಲಿದೆ.
ಈ ಯೋಜನೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ ಉತ್ತರ ಪ್ರದೇಶವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ರೂಪಿಸುವ ಗುರಿ ಹೊಂದಿದೆ.
Advertisement