

ಚೆನ್ನೈ: ಕರ್ನಾಟಕ ಅರಣ್ಯ ಇಲಾಖೆಯ ಗುಂಡಿನ ದಾಳಿಯಲ್ಲಿ ಮೃತಪಟ್ಟ ತಮಿಳರು ಎನ್ನಲಾದ ಮೂವರು ವ್ಯಕ್ತಿಗಳ ವಿಷಯವನ್ನು ವಿರೋಧ ಪಕ್ಷವಾದ ಡಿಎಂಕೆ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿತು. ಅಲ್ಲದೆ, ಅವರ ಕುಟುಂಬಗಳಿಗೆ ನ್ಯಾಯ ಒದಗಿಸಲು ತಮಿಳುನಾಡು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಗಳನ್ನು ಕೋರಿತು.
ರಾಜ್ಯ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಮೃತರಾದ ಆಂಥೋನಿ ಸಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಅವರ ಮರಣೋತ್ತರ ಪರೀಕ್ಷೆಯ ವರದಿಗಳು ಅವರಿಗೆ ಚಿತ್ರ ಹಿಂಸೆ ನೀಡಲಾಗಿದೆ. ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದೆ ಎಂಬುದನ್ನು ಸೂಚಿಸುತ್ತವೆ ಎಂದರು.
ಮೂವರ ದೇಹದ ಮೇಲೂ ಮೂಳೆ ಮುರಿತ ಸೇರಿದಂತೆ ತೀವ್ರ ಸ್ವರೂಪದ ಗಾಯಗಳಿದ್ದವು. ಇದೊಂದು ಕ್ರೂರ ಹತ್ಯೆ. ಇದನ್ನು ಖಂಡಿಸಲು ಈ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ನಾನು ತಿಳಿಯಬಯಸುತ್ತೇನೆ. ಕನಿಷ್ಠಪಕ್ಷ, ಕರ್ನಾಟಕ ಸರ್ಕಾರದಿಂದ ಈ ಬಗ್ಗೆ ಸ್ಪಷ್ಟನೆಯನ್ನಾದರೂ ಕೇಳಲಾಗಿದೆಯೇ? ಎಂದು ಉದಯನಿಧಿ ಪ್ರಶ್ನಿಸಿದರು.
ದಕ್ಷಿಣ ವಲಯ ಮಂಡಳಿ (Southern Zonal Council) ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆಯೇ ಅಥವಾ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಖಂಡನೆಯನ್ನು ವೈಯಕ್ತಿಕವಾಗಿ ತಿಳಿಸಿದ್ದಾರೆಯೇ ಎಂಬುದನ್ನೂ ಅವರು ತಿಳಿಯಬಯಸಿದರು. ಮೂವರ ಕುಟುಂಬಗಳಿಗೆ ಕಾನೂನು ನೆರವು ಒದಗಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಉದಯನಿಧಿ ಆಗ್ರಹಿಸಿದರು.
ಆಗಸ್ಟ್ 18 ರಂದು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿದಾಗ ರಾಜ್ಯದ ಸಚಿವರೊಬ್ಬರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಹೇಳಿದ್ದರು. ಕಾನೂನು ಸಚಿವರು ಶೀಘ್ರದಲ್ಲೇ ವಿವರವಾದ ಉತ್ತರವನ್ನು ನೀಡಲಿದ್ದಾರೆ ಎಂದೂ ಅವರು ತಿಳಿಸಿದರು. ಕರ್ನಾಟಕ ಅರಣ್ಯ ಇಲಾಖೆಯಿಂದ ಮೂವರ ಹತ್ಯೆ ನಡೆದಿದೆ ಎನ್ನಲಾದ ವಿಷಯವನ್ನು ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದು ಒಂದು ವಾರದ ಅವಧಿಯಲ್ಲಿ ಇದು ಎರಡನೇ ಬಾರಿಯಾಗಿದೆ.
ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದ ಮತ್ತು ಪ್ರಾಣಿ ಬೇಟೆಗಾರರೆಂದು ಆರೋಪಿಸಲ್ಪಟ್ಟಿದ್ದ ಆಂಥೋನಿ ಸಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಅವರನ್ನು, ಆಗಸ್ಟ್ 15 ರ ಮುಂಜಾನೆ ಕಾವೇರಿ ವನ್ಯಜೀವಿ ಧಾಮದ ಪ್ರದೇಶದಲ್ಲಿ ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿಕ್ಕಿ ಕೊಂದಿದ್ದರು. ಮೂವರು ವ್ಯಕ್ತಿಗಳು ತಮಿಳರು ಎಂದು ತಮಿಳುನಾಡಿನ ರಾಜಕೀಯ ಪಕ್ಷಗಳು ಪ್ರತಿಪಾದಿಸುತ್ತಾ ಬಂದಿವೆ.