

ಜೈಪುರ: ರಾಜಸ್ಥಾನದ ಪುಷ್ಕರ್ ನಲ್ಲಿ, ಗಾಜಾ ಮೇಲೆ ಇಸ್ರೇಲ್ ನಡೆಸಿದ ಜನಾಂಗೀಯ ದಾಳಿಗೆ ಸಂಬಂಧಿಸಿದ ಘೋಷಣೆಗಳನ್ನು ಹೊಂದಿರುವ ಪೋಸ್ಟರ್ಗಳನ್ನು ಅಂಟಿಸಿದ್ದಕ್ಕಾಗಿ ರಾಜ್ಯ ಪೊಲೀಸರ ಅಪರಾಧ ತನಿಖಾ ಇಲಾಖೆ(ಸಿಐಡಿ) ಇಬ್ಬರು ಬ್ರಿಟಿಷ್ ಪ್ರಜೆಗಳಿಗೆ ಭಾರತವನ್ನು ತೊರೆಯುವಂತೆ ನೋಟಿಸ್ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.
ಪೋಸ್ಟರ್ಗಳಲ್ಲಿ "ಫ್ಯಾಲೆಸ್ಟೈನ್ ಅನ್ನು ಮುಕ್ತಗೊಳಿಸಿ, ಇಸ್ರೇಲ್ ಅನ್ನು ಬಹಿಷ್ಕರಿಸಿ" ಎಂಬ ಘೋಷಣೆಗಳಿವೆ.
ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ಮಾಡಿರುವ ವರದಿಯ ಪ್ರಕಾರ, ಇಬ್ಬರು ಬ್ರಿಟಿಷ್ ಪ್ರಜೆಗಳು ಭಾರತದಲ್ಲಿ ಪ್ರವಾಸಿ ವೀಸಾದಲ್ಲಿದ್ದಾರೆ.
ಬ್ರಿಟಿಷ್ ಪ್ರಜೆಗಳ ಈ ಕ್ರಮ ವೀಸಾ ಷರತ್ತುಗಳ ಉಲ್ಲಂಘನೆಯಾಗಿದ್ದು, ಇದು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸುತ್ತದೆ ಎಂದು ಸಿಐಡಿ ಹೇಳಿಕೊಂಡಿದೆ.
ಭಾರತದಲ್ಲಿ ಇದ್ದುಕೊಂಡು ಇತರ ದೇಶಗಳಿಗೆ ಅಗೌರವ ತೋರಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ವೀಸಾ ಮಾನದಂಡಗಳನ್ನು ಉಲ್ಲಂಘಿಸುತ್ತದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಸಿಐಡಿ) ರಾಜೇಶ್ ಮೀನಾ ಹೇಳಿದ್ದಾರೆ.
ವಲಸೆ ಮತ್ತು ವಿದೇಶಿಯರ ಕಾಯ್ದೆ, 2025 ರ ನಿಬಂಧನೆಗಳ ಅಡಿಯಲ್ಲಿ ನೋಟಿಸ್ ಹೊರಡಿಸಲಾಗಿದ್ದು, ಇಬ್ಬರಿಗೂ ದೇಶ ತೊರೆಯುವಂತೆ ನಿರ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಐಡಿ ಮಧ್ಯ ಪ್ರವೇಶದ ನಂತರ, ಸಾರ್ವಜನಿಕ ಸ್ಥಳಗಳಿಂದ ಆ ಪೋಸ್ಟರ್ಗಳನ್ನು ತೆಗೆದುಹಾಕಲಾಯಿತು ಮತ್ತು ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಪ್ರದೇಶಗಳಲ್ಲಿ ಪೊಲೀಸರು ತಪಾಸಣೆ ನಡೆಸಿದರು.
Advertisement