

ಮುಂಬೈ: ಮಹಾರಾಷ್ಟ್ರದಲ್ಲಿ ಎನ್ ಸಿಪಿ ಬಣಗಳ ವಿಲೀನ ಮಾತುಗಳು ಕೇಳಿಬರುತ್ತಿರುವಂತೆಯೇ ಮಹಾರಾಷ್ಟ್ರದ ದಿವಂಗತ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರರಾದ ಪಾರ್ಥ ಪವಾರ್ ಮತ್ತು ಜಯ್ ಪವಾರ್ ಬುಧವಾರ ಬಾರಾಮತಿಯಲ್ಲಿ ಎನ್ಸಿಪಿ (SP) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪವಾರ್ ಕುಟುಂಬದ ಹುಟ್ಟೂರಾದ ಬಾರಾಮತಿಯಲ್ಲಿರುವ ವಿದ್ಯಾ ಪ್ರತಿಷ್ಠಾನ ಎಂಬ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಭೆ ನಡೆದಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಸಭೆ ನಡೆದಿದೆ. ಆದರೆ ಏನೆಲ್ಲಾ ಮಾತುಕತೆಗಳು ನಡೆದಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.
ಎರಡು ಎನ್ಸಿಪಿ ಬಣಗಳ ವಿಲೀನ ಮತ್ತು ಮುಂಬರುವ ಜಿಲ್ಲಾ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಾತುಕತೆ ನಡೆದಿರಬಹುದು ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಜನವರಿ 28 ರಂದು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಆದಾದ ಮೂರು ದಿನಗಳ ನಂತರ ಅವರ ಪತ್ನಿ ಸುನೇತ್ರಾ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಜಿತ್ ಪವಾರ್ ಮೃತಪಟ್ಟ ನಂತರ ವಿಲೀನದ ಮಾತುಕತೆಗಳು ನಡೆಯುತ್ತಿವೆ. ಎನ್ಸಿಪಿ ಬಣಗಳ ವಿಲೀನ ಘೋಷಿಸಲು ಫೆಬ್ರವರಿ 12 ರ ದಿನಾಂಕವನ್ನು ಅಜಿತ್ ಪವಾರ್ ಅಂತಿಮಗೊಳಿಸಿದ್ದರು ಎಂದು ಶರದ್ ಪವಾರ್ ಮತ್ತು ಅವರ ಪಕ್ಷದ ಇತರ ನಾಯಕರು ಹೇಳಿದ್ದಾರೆ.
ಆದರೆ, ಇಂತಹ ಹೇಳಿಕೆಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಳ್ಳಿಹಾಕಿದ್ದು, ವಿಲೀನದ ಮಾತುಕತೆಗಳು ನಡೆಯುತ್ತಿದ್ದರೆ ಅಜಿತ್ ಪವಾರ್ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದಿದ್ದಾರೆ.
Advertisement