

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಲು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ವಿರೋಧ ಪಕ್ಷಗಳು ಎತ್ತಿದ ವಿಷಯಗಳಿಗೆ, ವಿಶೇಷವಾಗಿ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಪುಸ್ತಕ(ಆತ್ಮಚರಿತ್ರೆ)ದಲ್ಲಿನ ವಿಷಯಗಳಿಗೆ "ಭಯ" ಪಟ್ಟು ಮೋದಿ ಲೋಕಸಭೆಗೆ ಬಂದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸಂಸದರಿಂದ ಪ್ರಧಾನಿಗೆ ಭದ್ರತಾ ಬೆದರಿಕೆ ಇತ್ತು ಎಂಬ ಹೇಳಿಕೆಯನ್ನು ತಳ್ಳಿಹಾಕಿದ ಲೋಕಸಭೆ ಪ್ರತಿಪಕ್ಷ ನಾಯಕ, ಆರೋಪ ಮಾಡುವ ಬದಲು ಕ್ರಮ ಕೈಗೊಳ್ಳಬೇಕು ಎಂದು ಸವಾಲು ಹಾಕಿದರು.
"ಯಾರಾದರೂ ಪ್ರಧಾನಿ ಮೇಲೆ ದಾಳಿ ಮಾಡುವುದಾಗಿ ಹೇಳಿದ್ದರೆ. ದಯವಿಟ್ಟು ಎಫ್ಐಆರ್ ಮಾಡಿ, ಆ ವ್ಯಕ್ತಿಯನ್ನು ಬಂಧಿಸಿ. ನೀವು ಅದನ್ನು ಏಕೆ ಮಾಡುತ್ತಿಲ್ಲ" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
"ಅದರ ಬಗ್ಗೆ ಯಾವುದೇ ಉತ್ತರ ಇಲ್ಲ. ಪ್ರಧಾನಿ ಸದನಕ್ಕೆ ಬರಲು ಹೆದರುತ್ತಿದ್ದರು ಎಂಬುದು ಇದರಿಂದ ಸ್ಪಷ್ಟವಾಗಿದೆ. ಸದಸ್ಯರ ಕಾರಣದಿಂದಾಗಿ ಅಲ್ಲ, ನಾನು ಹೇಳುತ್ತಿದ್ದ ಪುಸ್ತಕದ ಕಾರಣದಿಂದ. ಮೋದಿ ಇನ್ನೂ ಭಯಭೀತರಾಗಿದ್ದಾರೆ. ಏಕೆಂದರೆ ಅವರು ಸತ್ಯವನ್ನು ಎದುರಿಸಲು ಸಾಧ್ಯವಿಲ್ಲ" ಎಂದು ಗಾಂಧಿ ಗಾಂಧಿ ತಿಳಿಸಿದರು.
"ಕಾಂಗ್ರೆಸ್ ಸದಸ್ಯರು ಪ್ರಧಾನಿ ಮೇಲೆ ದಾಳಿ ಮಾಡುವ ಪ್ರಶ್ನೆಯೇ ಇಲ್ಲ" ಎಂದ ಅವರು, ಮೋದಿ ಸದನವನ್ನು ಎದುರಿಸಲು ಧೈರ್ಯ ಮಾಡಬೇಕಿತ್ತು ಎಂದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪುಸ್ತಕ ಪ್ರಕಟವಾಗಿಲ್ಲ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಆದರೆ ಆ "ಪುಸ್ತಕವನ್ನು ಪ್ರಕಟಿಸಲಾಗಿದೆ ಮತ್ತು ನಮಗೆ ಅದರ ಪ್ರತಿ ಸಿಕ್ಕಿದೆ" ಎಂದು ರಾಹುಲ್ ಗಾಂಧಿ ಹೇಳಿದರು.
Advertisement