

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಇಂಡಿಯಾ ಬ್ಲಾಕ್ ನಾಯಕರ ಸಭೆಯ ನಂತರ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು 'ಅವಿಶ್ವಾಸ' ನಿರ್ಣಯ ಮಂಡಿಸಲು ನಿರ್ಧರಿಸಿವೆ.
ಲೋಕಸಭೆಯಲ್ಲಿ ನಿರಂತರ ಗದ್ದಲದ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸದನದಲ್ಲಿ ಮಾತನಾಡಲು ಲೋಕಸಭಾ ಸ್ಪೀಕರ್ ಅನುಮತಿಸದಿರುವ ಬಗ್ಗೆ ಗದ್ದಲವೂ ಸೇರಿದೆ.
ಈ ನಿರ್ಣಯಕ್ಕಾಗಿ ನೋಟಿಸ್ ನ್ನು ಕಾಂಗ್ರೆಸ್ ಮುಖ್ಯ ಸಚೇತಕ ಸುರೇಶ್ ಕೋಡಿಕುನ್ನಿಲ್ ಮತ್ತು ಮೊಹಮ್ಮದ್ ಜಾವೇದ್ ಅವರು ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಿದ್ದಾರೆ.
ಸಂಸತ್ತಿನಲ್ಲಿ ನಿರ್ಣಯ ಮಂಡಿಸಲು ಅಗತ್ಯವಿರುವ 100 ಸಹಿಗಳ ಅಗತ್ಯವನ್ನು ಮೀರಿ 106 ಸಂಸದರಿಂದ ಸಹಿಗಳನ್ನು ಪಡೆದುಕೊಂಡಿದ್ದೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಈ ನಿರ್ಣಯಕ್ಕೆ ಸಮಾಜವಾದಿ ಪಕ್ಷ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಬೆಂಬಲವಿದೆ. ಆದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಔಪಚಾರಿಕವಾಗಿ ತನ್ನ ನಿಲುವನ್ನು ಘೋಷಿಸಿಲ್ಲ. ಟಿಎಂಸಿ ನಾಯಕರು ಸಭೆಯಲ್ಲಿ ಭಾಗವಹಿಸಲಿಲ್ಲ.
ಏತನ್ಮಧ್ಯೆ, ವಿರೋಧ ಪಕ್ಷಗಳು ಕೂಡ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿವೆ. ಸೋಮವಾರ ಸದನದಲ್ಲಿ ತೀವ್ರ ವಾಗ್ವಾದ ನಡೆದ ನಂತರ, ಸ್ಪೀಕರ್ ವಿರೋಧ ಪಕ್ಷಗಳು ಅಡ್ಡಿಪಡಿಸಲು "ಯೋಜಿಸುತ್ತಿವೆ" ಎಂದು ಆರೋಪಿಸಿದರು.
ಬಜೆಟ್ ಚರ್ಚೆ ಪ್ರಾರಂಭವಾಗುವ ಮೊದಲು ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂಬ ಬೇಡಿಕೆಯ ಮೇರೆಗೆ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಉಂಟಾದ ಗದ್ದಲದ ನಡುವೆ ಲೋಕಸಭೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಫೆಬ್ರವರಿ 2 ರಿಂದ ಸಂಸತ್ ಕಲಾಪಕ್ಕೆ ಪದೇ ಪದೇ ಅಡ್ಡಿಪಡಿಸಲಾಗುತ್ತಿದೆ. ವಿರೋಧ ಪಕ್ಷದ ಸದಸ್ಯರು ಹಲವಾರು ವಿಷಯಗಳನ್ನಿಟ್ಟುಕೊಂಡು ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ 2020 ರ ಭಾರತ-ಚೀನಾ ಗಡಿ ಘರ್ಷಣೆಯ ಕುರಿತು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಉಲ್ಲೇಖಿಸಲು ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡದಿರುವ ಅಧ್ಯಕ್ಷರ ನಿರ್ಧಾರವೂ ಸೇರಿದೆ.
ಕಳೆದ ವಾರ, ಸದನದಲ್ಲಿ ತೀವ್ರ ಗದ್ದಲದ ನಂತರ ಏಳು ಕಾಂಗ್ರೆಸ್ ಸಂಸದರು ಮತ್ತು ಒಬ್ಬ ಸಿಪಿಐ(ಎಂ) ಸದಸ್ಯರನ್ನು ಉಳಿದ ಅವಧಿಗೆ ಅಮಾನತುಗೊಳಿಸಲಾಯಿತು.
Advertisement