

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆಕಾಶವಾಣಿಯಲ್ಲಿನ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕರ್ನಾಟಕದ ರೈತರನ್ನು ಪ್ರಶಂಸಿಸಿದ್ದಾರೆ.
ಕರ್ನಾಟಕದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರವಾನೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ನಂಜನಗೂಡಿನ ಬಾಳೆಹಣ್ಣು, ಮೈಸೂರಿನ ವೀಳ್ಯೆದೆಲೆ ಹಾಗೂ ಇಂಡಿಯಲ್ಲಿ ಬೆಳೆಯುವ ನಿಂಬೆಹಣ್ಣುಗಳನ್ನು ಮಾಲ್ಡೀವ್ಸ್ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಈ ಉತ್ಪನ್ನಗಳು ರುಚಿಯ ಜೊತೆಗೆ ಗುಣಮಟ್ಟ ಕೂಡಾ ಹೊಂದಿವೆ. ಅವುಗಳಿಗೆ ಜಿಐ ಟ್ಯಾಗ್ ಕೂಡಾ ಇದೆ ಎಂದು ಅವರು ಹೇಳಿದ್ದಾರೆ.
ಇಂದಿನ ರೈತರು ಗುಣಮಟ್ಟದ ಕೃಷಿಯ ಜೊತೆಗೆ ಉತ್ಪನ್ನದ ಪ್ರಮಾಣವನ್ನು ಕೂಡಾ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ನೆಲ, ಜಲವನ್ನು ಸರಿಯಾಗಿ ಉಪ ಯೋಗಿಸಿಕೊಳ್ಳುವ ಮೂಲಕ ಉತ್ತಮ ಆದಾಯ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಒಡಿಶಾದ ಹಿರೋಡ್ ಪಟೇಲ್ ಎಂಬ ಯುವ ಕೃಷಿಕ , ಆಧುನಿಕ ಕೃಷಿ ಮೂಲಕ ಗಮನ ಸೆಳೆಯುತ್ತಿದ್ದಾನೆ. ಕೃಷಿ ಹೊಂಡದಲ್ಲಿ ತರಕಾರಿ ಬೆಳೆದರೆ, ಅದರ ಸುತ್ತ ಬಾಳೆಹಣ್ಣು, ತೆಂಗನ್ನು ಬೆಳೆಯುತ್ತಿದ್ದಾನೆ. ಆ ಹೊಂಡದಲ್ಲೇ ಮೀನು ಸಾಕಾಣಿಕೆ ಕೂಡಾ ಮಾಡುತ್ತಿದ್ದಾನೆ. ಹಲವು ರೈತರಿಗೆ ಈತ ಪ್ರೇರಣೆಯಾಗಿದ್ದಾನೆ ಎಂದು ಪ್ರಧಾನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Advertisement