

ಶ್ರೀ ವಿಜಯಪುರಂ: ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲೆಯ ರಂಗಟ್ ನಿಂದ ಮಂಗಳವಾರ ಬೆಳಗ್ಗೆ ಹಾರಿದ, ಇಬ್ಬರು ಸಿಬ್ಬಂದಿ ಸೇರಿದಂತೆ ಏಳು ಜನರನ್ನು ಹೊತ್ತ ಪವನ್ ಹನ್ಸ್ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನವಾಗಿದೆ. ಅದೃಷ್ಟವಶಾತ್ ಅವರೆಲ್ಲರನ್ನೂ ರಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ 9.30 ರ ಸುಮಾರಿಗೆ ಹೆಲಿಕಾಪ್ಟರ್ ಪತನವಾಗಿದೆ ಎಂದು ಅವರು ಹೇಳಿದ್ದಾರೆ.
ಸಮುದ್ರದ ಮಧ್ಯದಿಂದ ರಕ್ಷಿಸಲ್ಪಟ್ಟ ಎಲ್ಲಾ ಐದು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಶ್ರೀ ವಿಜಯಪುರಂನಿಂದ ಬೆಳಗ್ಗೆ 8.45 ರ ಸುಮಾರಿಗೆ ಹೆಲಿಕಾಪ್ಟರ್ ಟೇಕಾಫ್ ಆಯಿತು ಮತ್ತು ಬೆಳಗ್ಗೆ 9.30 ರ ಸುಮಾರಿಗೆ ಸಮುದ್ರಕ್ಕೆ ಅಪ್ಪಳಿಸಿತು.
ಪ್ರಾಥಮಿಕ ತನಿಖೆಯಲ್ಲಿ ಹೆಲಿಕಾಪ್ಟರ್ ಪತನಕ್ಕೆ ತಾಂತ್ರಿಕ ದೋಷ ಕಾರಣ ಎಂದು ತಿಳಿದುಬಂದಿದೆ ಮತ್ತು ಪೈಲಟ್ ಸಮುದ್ರದಲ್ಲಿ ಕ್ರ್ಯಾಶ್-ಲ್ಯಾಂಡಿಂಗ್ ಮಾಡಿದ್ದಾರೆ ಎಂದು ಹಿರಿಯ ನಾಗರಿಕ ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಪೈಲಟ್ ಸೇರಿದಂತೆ ಒಟ್ಟು ಏಳು ಜನ ಹೆಲಿಕಾಪ್ಟರ್ ನಲ್ಲಿದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ ಮತ್ತು ನಾವು ಇನ್ನೂ ಪೈಲಟ್ ಹೇಳಿಕೆ ಪಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.
ಗಾಯಗೊಂಡವರೆಲ್ಲರೂ ಮಾಯಾಬಂದರ್ನ ಡಾ. ರಾಜೇಂದ್ರ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಶ್ರೀ ವಿಜಯಪುರಂಗೆ ಕರೆತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement