

ಪುರಿ ರಥಯಾತ್ರೆ: ಇತಿಹಾಸ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ಆರಂಭವಾಗಿದ್ದು, ಭಾರಿ ಜನಸಾಗರಿಂದ ಕಾಲ್ತುಳಿತ ಉಂಟಾಗಿದ್ದು, ಒಬ್ಬರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಇತಿಹಾಸ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಭಾರಿ ಜನಸಾಗರದ ನಡುವೆ ಸಿಲುಕಿ ನೂರಾರು ಮಂದಿ ಅಸ್ವಸ್ಥಗೊಂಡಿದ್ದು,ಈ ಪೈಕಿ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
60 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಯೊಬ್ಬರು ಜನಸಾಗರದ ನಡುವೆ ಸಿಲುಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ ಪ್ರತ್ಯೇಕ ಹಾಗೂ ಸಂಬಂಧವಿಲ್ಲದ ಮತ್ತೊಂದು ಘಟನೆಯಲ್ಲಿ 35 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಯೊಬ್ಬರು ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಜನಸಂದಣಿಯಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ಏಳು ಮಂದಿಯನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಪರಿಸ್ಥಿತಿ ಸಹಜವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿನಿಂದ ಜುಲೈ 24ರವರೆಗೆ ನಡೆಯಲಿರುವ ರಥಯಾತ್ರೆಗೆ ಅತ್ಯಂತ ಪವಿತ್ರ ಹಾಗೂ ವಿಶಿಷ್ಟವಾದ ಮಹತ್ವವಿದೆ. ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದ ಈ ಯಾತ್ರೆ ಚಾಲನೆ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಜಗನ್ನಾಥ ಸ್ವಾಮಿ ತನ್ನ ಹಿರಿಯ ಸಹೋದರ ಬಲಭದ್ರ ಹಾಗೂ ತಂಗಿ ಸುಭದ್ರೆಯ ಜೊತೆಗೂಡಿ ನಗರ ಸಂಚಾರಕ್ಕೆ ಹೊರಡುತ್ತಾನೆ. ಮೂರು ದೇವತೆಗಳು ಗುಂಡಿಚಾ ಮಂದಿರಕ್ಕೆ ಪ್ರಯಾಣ ಬೆಳೆಸಿವೆ.