

ಚೆನ್ನೈ: ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ, ಆಡಳಿತ ಪಕ್ಷದ ಹಲವು ಶಾಸಕರಿಗೆ ಲಂಚದ ಆಮಿಷ ಒಡ್ಡಲಾಗಿದೆ ಎನ್ನಲಾದ 'ಪ್ರಾಜೆಕ್ಟ್ ಮೇಘಾಲಯ' ಎಂಬ ಆಪಾದಿತ ಸಂಚಿನ ಕುರಿತು ಚೆನ್ನೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಾದೇಶಿಕ ವಾಹಿನಿಯೊಂದರ ಹಿರಿಯ ಪತ್ರಕರ್ತನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಈಗಾಗಲೇ ತನಿಖೆ ತೀವ್ರಗೊಂಡಿದ್ದು, ಪ್ರಾದೇಶಿಕ ಸುದ್ದಿ ಸಂಸ್ಥೆಯೊಂದರ ಪತ್ರಕರ್ತ ವಿಜಯನ್ ಎಂಬುವವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.
ಟಿವಿಕೆ ಪಕ್ಷದ ಉತ್ತಂಗರೈ ಕ್ಷೇತ್ರದ ಶಾಸಕ ಎನ್. ಇಳಯರಾಜ ಅವರು ನೀಡಿದ ದೂರಿನ ಆಧಾರದ ಮೇಲೆ ಈ ತನಿಖೆ ಆರಂಭವಾಗಿದೆ. ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಲು ತಮಗೆ ಬರೋಬ್ಬರಿ 35 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಶಾಸಕರು ಆರೋಪಿಸಿದ್ದಾರೆ.
ಲಂಚದ ಆಫರ್ ಅನ್ನು ನಿರಾಕರಿಸಿದ ನಂತರ ತಮಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ಜೀವಬೆದರಿಕೆ ಒಡ್ಡಲಾಗಿತ್ತು 'ಐಪಿಡಿಎಸ್' ಎಂಬ ಸಂಸ್ಥೆಯ ಮೂಲಕ ಒಪಿನಿಯನ್ ಪೋಲ್ ನಡೆಸುವ ಯೂಟ್ಯೂಬರ್ ತಿರುನಾವುಕ್ಕರಸು ಹಾಗೂ ಅವರ ತಂಡ ಈ ಆಮಿಷದ ಹಿಂದೆ ಇತ್ತು ಎಂದು ದೂರಲ್ಲಿ ಹೆಸರಿಸಲಾಗಿದೆ.
ಟಿವಿಕೆ ಪಕ್ಷದ ಸುಮಾರು 15 ಶಾಸಕರನ್ನು ಇದೇ ರೀತಿ ಹಣದ ಆಮಿಷದ ಮೂಲಕ ಸೆಳೆದು, ವಿಜಯ್ ನೇತೃತ್ವದ ಸರ್ಕಾರವನ್ನು ಬೀಳಿಸಲು 'ಪ್ರಾಜೆಕ್ಟ್ ಮೇಘಾಲಯ' ಹೆಸರಿನಲ್ಲಿ ಜಾಲವೊಂದು ಸಕ್ರಿಯವಾಗಿತ್ತು ಎಂಬುದು ಬೆಳಕಿಗೆ ಬಂದಿದೆ.
ಈ ಸಂಚಿನ ಮುಖ್ಯ ಆರೋಪಿ ತಿರುನಾವುಕ್ಕರಸು ಜೊತೆ ನಿರಂತರ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಪತ್ರಕರ್ತ ವಿಜಯನ್ ಅವರನ್ನು ಜುಲೈ 15 ಮತ್ತು 16 ರಂದು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅವರ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.