

ನವದೆಹಲಿ: ಅಯೋಧ್ಯೆ ರಾಮಮಂದಿರದ ದೇಣಿಗೆ ದುರುಪಯೋಗ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಈಗ ಸತ್ಯವನ್ನು ಬಹಿರಂಗಪಡಿಸುವ ಸ್ಥಿತಿಯಲ್ಲಿ ನಾನಿಲ್ಲ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
ದೆಹಲಿಯಲ್ಲಿ 10 ದಿನಗಳ ವಾಸ್ತವ್ಯದಿಂದ ಹಿಂದಿರುಗಿದ ನಂತರ ವಿಷ್ಣೋಹರ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್ ನಾನು ತುಂಬಾ ದುರ್ಬಲ ವ್ಯಕ್ತಿ. ಅವರು ಬಹಳ ಪ್ರಭಾವಶಾಲಿ ಜನರು, ನಾನು ಸತ್ಯವನ್ನು ಮಾತನಾಡಿದರೆ ತೊಂದರೆಗೆ ಸಿಲುಕುತ್ತೇನೆ. ನನಗೆ ಈಗ ಸತ್ಯವನ್ನು ಮಾತನಾಡಲು ಧೈರ್ಯವಿಲ್ಲ. ಸಮಯ ಬಂದರೆ, ನಾನು ಮಾತನಾಡುತ್ತೇನೆ" ಎಂದು ಹೇಳಿದರು.
ಆದರೆ, ‘ಅವರು’ ಎಂದರೆ ‘ಯಾರು’ ಎಂಬುದನ್ನು ಸಿಂಗ್ ಸ್ಪಷ್ಟಪಡಿಸಲಿಲ್ಲ. ಅಯೋಧ್ಯೆಯ ರಾಮಮಂದಿರಕ್ಕೆ ಬಂದ ದೇಣಿಗೆ ಹಣ ದುರುಪಯೋಗಪಡಿಸಿಕೊಳ್ಳಾಗಿದೆ ಎಂಬ ಆರೋಪದ ನಡುವೆಯೇ ಸಿಂಗ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.
ಇದೇ ವೇಳೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಧರ್ಮೇಂದ್ರ ಅವರ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
Advertisement