ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆ: ಪಕ್ಷದ ಸಂಸದೀಯ ಸಭೆಗೆ ಆರು ಸಂಸದರು ಗೈರು; ಶಿಂಧೆ ಬಣ ಸೇರುವ ಸಾಧ್ಯತೆ

ಗೈರಾದ ಆರು ಸಂಸದರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.
Six Shiv Sena (UBT) MPs skip party meet, defection to Shinde camp appears near
ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವತ್
Updated on

ನವದೆಹಲಿ: ಮಹಾರಾಷ್ಟ್ರ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಗುರುವಾರ ಶಿವಸೇನೆ(ಯುಬಿಟಿ)ಯ ಒಂಬತ್ತು ಸಂಸದರಲ್ಲಿ ಆರು ಸಂಸದರು ಸಂಸದೀಯ ಪಕ್ಷದ ಸಭೆಗೆ ಗೈರು ಆಗಿದ್ದು, ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಶಿವಸೇನೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಜೊತೆಗೆ ಸಂಸದರಾದ ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಭಾವು ವಾಜೆ ಮಾತ್ರ ಈ ಸಭೆಯಲ್ಲಿ ಭಾಗವಹಿಸಿದ್ದರು. ಉಳಿದ ಆರು ಸಂಸದರಾದ ನಾಗೇಶ್ ಆಶ್ತಿಕರ್, ಸಂಜಯ್ ದೇಶಮುಖ್, ಸಂಜಯ್ ಜಾಧವ್, ಸಂಜಯ್ ದಿನಾ ಪಾಟೀಲ್, ಓಂಪ್ರಕಾಶ್ ರಾಜೇನಿಂಬಾಳ್ಕರ್ ಮತ್ತು ಭೌಸಾಹೇಬ್ ವಾಕ್ಚೌರೆ ಅವರು ಸಭೆಗೆ ಗೈರು ಆಗಿದ್ದಾರೆ.

ಗೈರಾದ ಆರು ಸಂಸದರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರ ನಡುವೆ ಸಭೆಗೆ ಗೈರಾದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಉದ್ಧವ್ ಸೇನಾ ನಾಯಕತ್ವ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.

ಈ ಆರು ಸಂಸದರು ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಳ್ಳಲು ಕೋರುವ ಪತ್ರಕ್ಕೆ ಸಹಿ ಹಾಕಿದ್ದಾರೆ ಮತ್ತು ಅದನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Six Shiv Sena (UBT) MPs skip party meet, defection to Shinde camp appears near
ಸೇನಾ-ಯುಬಿಟಿ ಕಾರ್ಯಕರ್ತರಿಂದ ಬಂಡಾಯ ನಾಯಕರ ಮುಖಕ್ಕೆ ಸಗಣಿ ಬಳಿಯುವುದಾಗಿ ಬೆದರಿಕೆ!

ಆದಾಗ್ಯೂ, ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಸ್ಪೀಕರ್ ಕಚೇರಿ ಕೆಲವು ಸಂಸದರಿಂದ ವೈಯಕ್ತಿಕ ಪರಿಶೀಲನೆಯನ್ನು ಕೋರಿದೆ ಎಂದು ತಿಳಿದುಬಂದಿದೆ. ಸಹಿಗಳ ಪರಿಶೀಲನೆ ಪ್ರಸ್ತುತ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ, ಶಿವಸೇನೆ(ಯುಬಿಟಿ) ತನ್ನ ಎಲ್ಲಾ ಲೋಕಸಭಾ ಸಂಸದರು ಗುರುವಾರದ ಸಭೆಯಲ್ಲಿ ಭಾಗವಹಿಸಬೇಕೆಂದು ನಿರ್ದೇಶಿಸುವ ಮೂರು ಸಾಲಿನ ವಿಪ್ ಅನ್ನು ಹೊರಡಿಸಿತ್ತು. ಇದು ಭಿನ್ನಮತೀಯರ ವಿರುದ್ಧ ಸಂಭವನೀಯ ಕ್ರಮಕ್ಕೆ ಅಡಿಪಾಯ ಹಾಕುವ ಕ್ರಮವಾಗಿದೆ.

"ಪಕ್ಷದ ಮುಖ್ಯಸ್ಥ(ಉದ್ಧವ್ ಠಾಕ್ರೆ)ರನ್ನು ಸಂಪರ್ಕಿಸಿದ ನಂತರ ವಿಪ್ ಅನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಸಾವಂತ್ ಸಭೆಗೆ ಮುಂಚಿತವಾಗಿ ಸುದ್ದಿಗಾರರಿಗೆ ತಿಳಿಸಿದರು.

ಇನ್ನು ಸಭೆಗೂ ಮುನ್ನ ಮಾತನಾಡಿದ ಸಂಜಯ್ ರಾವತ್, ಯಾರು ಬರುತ್ತಾರೋ ಅವರು ನಮ್ಮವರು, ಯಾರು ಬರುವುದಿಲ್ಲವೋ ಅವರು ದ್ರೋಹಿಗಳು ಎಂದು ಕಿಡಿಕಾರಿದರು. ಈ ಬೆಳವಣಿಗೆ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ರಾಜಕೀಯ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಒಮ್ಮೆ ವಿಭಜನೆಯಾಗಿತ್ತು. ಇದೀಗ ಮತ್ತೆ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗುತ್ತಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com