

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಶುಕ್ರವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅಸ್ತಿತ್ವದಲ್ಲಿರುವ ಕಲ್ಯಾಣ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸುವುದು, ಆರೋಗ್ಯ ಸೇವೆ ಬಲಪಡಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿ ಒಳಗೊಂಡ 10 ಪ್ರತಿಜ್ಞೆಗಳನ್ನು ಮಾಡಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಟಿಎಂಸಿ ಸತತ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಬದ್ಧತೆಗಳು ಸರ್ಕಾರಕ್ಕೆ ಮಾರ್ಗದರ್ಶಿ ನಕ್ಷೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.
"ಮುಂದಿನ ಐದು ವರ್ಷಗಳಲ್ಲಿ ನಮ್ಮ ಸರ್ಕಾರದ 10 'ಪ್ರತಿಜ್ಞೆ'ಗಳನ್ನು ನಿಮ್ಮ ಮುಂದೆ ಗೌರವಯುತವಾಗಿ ಪ್ರಸ್ತುತಪಡಿಸುತ್ತೇನೆ" ಎಂದು ದೀದಿ ಹೇಳಿದರು.
ಪ್ರಮುಖ ಬದ್ಧತೆಗಳಲ್ಲಿ ಆರೋಗ್ಯ ಸೇವೆ ಮನೆ ಬಾಗಿಲಿಗೆ ತಲುಪಿಸುವ 'ದುವಾರೆ ಚಿಕಿತ್ಸೆ'ಯಾಗಿದ್ದು, ರಾಜ್ಯ ಸರ್ಕಾರವು ಪ್ರತಿ ವರ್ಷ ಪ್ರತಿ ಬ್ಲಾಕ್ ಮತ್ತು ಪಟ್ಟಣದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ಆರೋಗ್ಯ ಸೇವೆಗಳು ಪ್ರತಿ ಮನೆಯ ಅಂಗಳವನ್ನು ತಲುಪುತ್ತವೆ. ಪ್ರತಿ ಬ್ಲಾಕ್ ಮತ್ತು ಪಟ್ಟಣದಲ್ಲಿನ ದುವಾರೆ ಚಿಕಿತ್ಸೆ ಶಿಬಿರಗಳ ಮೂಲಕ, ಜನರು ತಮ್ಮ ಮನೆ ಬಾಗಿಲಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯುತ್ತಾರೆ" ಎಂದು ಸಿಎಂ ತಿಳಿಸಿದರು.
ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುವ ಪ್ರಮುಖ ಕಲ್ಯಾಣ ಕಾರ್ಯಕ್ರಮವಾದ 'ಲಕ್ಷ್ಮಿ ಭಂಡಾರ್' ಯೋಜನೆಯಡಿ ಮಹಿಳೆಯರಿಗೆ ನೀಡುತ್ತಿರುವ ಹಣವನ್ನು ಹೆಚ್ಚಿಸುವುದಾಗಿ ಪಕ್ಷ ಭರವಸೆ ನೀಡಿದೆ. ಮಹಿಳೆಯರ ಸಬಲೀಕರಣವು ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಮಾಸಿಕ ಆರ್ಥಿಕ ಸಹಾಯವನ್ನು 500 ರೂ. ಹೆಚ್ಚಿಸಲಾಗುವುದು. ಸಾಮಾನ್ಯ ವರ್ಗದ ಮಹಿಳೆಯರು ತಿಂಗಳಿಗೆ 1,500 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸೇರಿದವರು ನೇರ ವರ್ಗಾವಣೆಯ ಮೂಲಕ ತಿಂಗಳಿಗೆ 1,700 ರೂ.ಗಳನ್ನು ನೀಡಲಾಗುವುದು ಎಂದರು.
Advertisement