

ತಿರುವನಂತಪುರಂ: ಮುಂಬರುವ ಕೇರಳಂ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಮಂಗಳವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ, ವಲಯ-ನಿರ್ದಿಷ್ಟ ಆರ್ಥಿಕ ಬೆಳವಣಿಗೆ ಮತ್ತು ಮಹಿಳೆಯರು ಹಾಗೂ ಬಡ ಕುಟುಂಬಗಳಿಗೆ ಕಲ್ಯಾಣ ಕ್ರಮಗಳ ವಿವರವಾದ ಮಾರ್ಗಸೂಚಿಯನ್ನು ವಿವರಿಸುತ್ತದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಇಂದು ಕೇಸರಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕೇರಳವನ್ನು ಆದ್ಯತೆಯ ಜಾಗತಿಕ ಪ್ರವಾಸೋದ್ಯಮ ತಾಣವಾಗಿ ಮತ್ತು ರಾಜ್ಯದ ನಗರಗಳನ್ನು ವಿಶೇಷ ಆರ್ಥಿಕ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದೆ.
ತಿರುವನಂತಪುರವನ್ನು ಐಟಿ ಮತ್ತು ನಾವೀನ್ಯತೆ ರಾಜಧಾನಿಯಾಗಿ, ಕೊಚ್ಚಿಯನ್ನು ಭಾರತದ ಹಡಗು ನಿರ್ಮಾಣ ಕೇಂದ್ರವಾಗಿ, ಕೋಝಿಕ್ಕೋಡ್ ಅನ್ನು ಆರೋಗ್ಯ ಮತ್ತು ವೈದ್ಯಕೀಯ ನಾವೀನ್ಯತೆ ಕೇಂದ್ರವಾಗಿ, ತ್ರಿಶೂರ್ ಅನ್ನು ಸಾಂಸ್ಕೃತಿಕ ಪ್ರವಾಸೋದ್ಯಮ ರಾಜಧಾನಿಯಾಗಿ, ಕೊಲ್ಲಂ ಅನ್ನು ಸಮುದ್ರ ರಫ್ತಿಗೆ ಆದ್ಯತೆ ನೀಡುವ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ನೀಲಿ ಆರ್ಥಿಕ ಕ್ಲಸ್ಟರ್ ಆಗಿ ಹಾಗೂ ಕಣ್ಣೂರನ್ನು ರಕ್ಷಣಾ ನಾವೀನ್ಯತೆ ಕೇಂದ್ರವಾಗಿ ಅಭಿವೃದ್ಧಿ ಮಾಡುವುದಾಗಿ ಬಿಜೆಪಿ ಭರವಸೆ ನೀಡಿದೆ.
ಈ ಎಲ್ಲಾ ವಲಯಗಳು ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಬಿಜೆಪಿ ಒತ್ತಿ ಹೇಳಿದೆ.
ಇನ್ನು ಅಗತ್ಯವಿರುವ ಮಹಿಳೆಯರಿಗೆ ಭಕ್ತ ಆರೋಗ್ಯ ಸುರಕ್ಷಾ ಕಾರ್ಡ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದ್ದು, ಇದು ಔಷಧಿ ಮತ್ತು ದಿನಸಿಗಳಿಗೆ ಮಾಸಿಕ 2,500 ರೂ.ಗಳ ರೀಚಾರ್ಜ್ ಅನ್ನು ಒದಗಿಸುತ್ತದೆ. ಕೇರಳದಲ್ಲಿ ಏಮ್ಸ್ ಸ್ಥಾಪಿಸುವುದರ ಜೊತೆಗೆ ತಿರುವನಂತಪುರಂನಿಂದ ಕಣ್ಣೂರಿಗೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ರೈಲು ಜಾಲವನ್ನು ಪ್ರಣಾಳಿಕೆ ಪ್ರಸ್ತಾಪಿಸಲಾಗಿದೆ.
ಪ್ರತಿ ಮನೆಗೂ ತಿಂಗಳಿಗೆ 20,000 ಲೀಟರ್ ಉಚಿತ ನೀರು, ಬಡ ಕುಟುಂಬಗಳಿಗೆ ವರ್ಷಕ್ಕೆ ಎರಡು ಉಚಿತ ಎಲ್ಪಿಜಿ ಸಿಲಿಂಡರ್ಗಳನ್ನು ಒದಗಿಸುವುದು, ಓಣಂ ಸಮಯದಲ್ಲಿ ಒಂದು ಮತ್ತು ಕ್ರಿಸ್ಮಸ್ ಸಮಯದಲ್ಲಿ ಒಂದು ಉಚಿತ ಸಿಲಿಂಡರ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.
Advertisement