

ಕೋಲ್ಕತ್ತಾ: ಬಿಜೆಪಿ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ಒಳನುಸುಳುವಿಕೆ ಮತ್ತು ಗೋವುಗಳ ಕಳ್ಳಸಾಗಣೆ "ಅಸಾಧ್ಯ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸುವೇಂದು ಅಧಿಕಾರಿ ಅವರನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಳಿಕ ಮಾತನಾಡಿದ ಅಮಿತ್ ಶಾ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭರ್ಜರಿ ಗೆಲುವು ಕೇವಲ ಸಂಘಟನೆಯ ಶಕ್ತಿ ಅಥವಾ ಸಿದ್ಧಾಂತಕ್ಕಷ್ಟೇ ಸೀಮಿತವಾಗಿಲ್ಲ ಎಂದು ಹೇಳಿದರು.
ಈ ಜನಾದೇಶವು ರಾಜ್ಯದಲ್ಲಿ ಬಲವಾದ ರಾಷ್ಟ್ರೀಯ ಭದ್ರತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಪುನಃಸ್ಥಾಪನೆಗಾಗಿ ಜನರ ಬಯಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆ ಟಿಎಂಸಿ ಆಡಳಿತದ ವಿರುದ್ಧವಾಗಿ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತದಲ್ಲಿ, ರಾಜ್ಯದಲ್ಲಿ "ರಾಜಕೀಯ ಧ್ರುವೀಕರಣ ಮತ್ತು ರಾಜಕೀಯದ ಅಪರಾಧೀಕರಣ" ನಡೆದಿದೆ ಎಂದು ಆರೋಪಿಸಿದರು.
"ಬಿಜೆಪಿಯ ಆಳ್ವಿಕೆಯಲ್ಲಿ, ಯಾವುದೇ ಆಡಳಿತವನ್ನು ರಾಜಕೀಯಗೊಳಿಸಲಾಗುವುದಿಲ್ಲ ಅಥವಾ ರಾಜಕೀಯವನ್ನು ಅಪರಾಧೀಕರಿಸಲಾಗುವುದಿಲ್ಲ" ಎಂದು ಅಮಿತ್ ಶಾ ಭರವಸೆ ನೀಡಿದರು.
Advertisement