

ನವದೆಹಲಿ: ನೆರೆಯ ಪಾಕಿಸ್ತಾನದೊಂದಿಗಿನ ಬಿಕ್ಕಟ್ಟನ್ನು ಪರಿಹರಿಸಲು ಜನರಿಂದ ಜನರಿಗೆ ಸಂಪರ್ಕವು ಅತ್ಯಂತ ಮುಖ್ಯವಾಗಿದೆ ಮತ್ತು ಮಾತುಕತೆಗೆ ಯಾವಾಗಲೂ ಒಂದು ವಿಂಡೋ ಇರಬೇಕು ಎಂದ ಆರ್ಎಸ್ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರ ನಿಲುವನ್ನು ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಣೆ ಅವರು ಬೆಂಬಲಿಸಿದ್ದಾರೆ. ಮತ್ತು ಅಂತಹ ಕಾರ್ಯಯೋಜನೆಗಳು "ಮುಖ್ಯ" ಎಂದು ಹೇಳಿದ್ದಾರೆ.
"ಸಾಮಾನ್ಯ ಮನುಷ್ಯನ" ಮೂಲಭೂತ ಹೋರಾಟಗಳು, ನಿರ್ದಿಷ್ಟವಾಗಿ "ರೋಟಿ, ಕಪ್ಡಾ ಮತ್ತು ಮಕಾನ್"(ಆಹಾರ, ಬಟ್ಟೆ ಮತ್ತು ಆಶ್ರಯ)ನಂತಹ ಮೂಲಭೂತ ಅಗತ್ಯಗಳು ಗಡಿಯ ಎರಡೂ ಬದಿಗಳಲ್ಲಿ ಒಂದೇ ಆಗಿರುತ್ತವೆ ಎಂದು ಮಾಜಿ ಸೇನಾ ಮುಖ್ಯಸ್ಥರು ಹೇಳಿದ್ದಾರೆ.
"ಸಾಮಾನ್ಯ ಮನುಷ್ಯನಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇಬ್ಬರು ವ್ಯಕ್ತಿಗಳ ನಡುವೆ ಸ್ನೇಹವಿದ್ದಾಗ, ಎರಡು ರಾಷ್ಟ್ರಗಳ ನಡುವೆಯೂ ಸ್ನೇಹ ಇರುತ್ತದೆ" ಎಂದು ಬುಧವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನರವಣೆ ಪಿಟಿಐಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಜೊತೆ ಮಾತುಕತೆಗೆ ಅವಕಾಶ ನೀಡಬೇಕು ಎಂಬ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನರವಣೆ ಅವರು, "ಇದು ಸರಿಯಾದ ವಿಷಯ. ಜನರಿಂದ ಜನರಿಗೆ ಸಂಪರ್ಕ ಮುಖ್ಯ" ಎಂದರು.
ರಾಜತಾಂತ್ರಿಕತೆಯ ಮೂಲಕವಾಗಲಿ ಅಥವಾ ಕ್ರೀಡಾಕೂಟದ ಮೂಲಕಲಾಗಲಿ ಎರಡೂ ದೇಶಗಳ ನಡುವೆ ಜನರಿಂದ ಜನರಿಗೆ ಸಂಪರ್ಕ ಇರಬೇಕು. ಗಡಿಯಾಚೆ ಇರುವವರು ನಮ್ಮ ಬದ್ಧ ವೈರಿಗಳಲ್ಲ ಎಂದು ನಮ್ಮ ಜನರು ಸಹ ತಿಳಿದುಕೊಳ್ಳಬೇಕು ಎಂದು ನರವಣೆ ಹೇಳಿದರು.
"ವಿವಾದಗಳನ್ನು ಚರ್ಚೆಯ ಮೂಲಕ ಪರಿಹರಿಸಬೇಕು. ಇದರರ್ಥ ನಮ್ಮಿಂದ ಮಿಲಿಟರಿ ಬಲವನ್ನು ಬಳಸಲು ಸಾಧ್ಯವಿಲ್ಲ ಎಂದಲ್ಲ. ಭಾರತ ಶಾಂತಿಯ ಭಾಷೆಯನ್ನು ಮಾತನಾಡುವ ದೇಶ, ಆದರೆ ಅಗತ್ಯವಿದ್ದರೆ ಬಲಪ್ರಯೋಗಿಸಲು ನಾವು ಹಿಂಜರಿಯುವುದಿಲ್ಲ" ಎಂದು ಅವರು ಹೇಳಿದರು.
Advertisement