

ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ ಭಯಾನಕ ಅಪಘಾತ ಸಂಭವಿಸಿದ್ದು, ಎಸ್ಯುವಿ ಕಾರೊಂದು ಒಂದು ಸಾವಿರ ಅಡಿ ಆಳವಾದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಎಂಟು ಪ್ರವಾಸಿಗರು ಮೃತಪಟ್ಟಿದ್ದಾರೆ.
ಪಶ್ಚಿಮ ಘಟ್ಟದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾದ ಅಂಬೆನಾಲಿ ಘಾಟ್ ಬಳಿಯ ಮಹಾಬಲೇಶ್ವರ-ಪೋಲಾದ್ಪುರ ರಸ್ತೆಯಲ್ಲಿ ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.
ಮೃತ ಯುವಕರು ಸತಾರಾ ಜಿಲ್ಲೆಯ ನಿವಾಸಿಗಳಾಗಿದ್ದು, ದುರಂತ ಸಂಭವಿಸಿದಾಗ ದಪೋಲಿಯಿಂದ ಸತಾರಾಕ್ಕೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸತಾರಾ ನಿವಾಸಿಗಳಾದ ರಿತೇಶ್ ಲೋಖಂಡೆ(22), ಸುಹಾಸ್ ಲೋಖಂಡೆ(20)ಸ ಉತ್ಕರ್ಷ್ ಶಿಂಗ್ಟೆ(21), ನಿಖಿಲ್ ಶಿಂಗ್ಟೆ(25), ಮಹೇಶ್ ಪವಾರ್(25), ಆದಿತ್ಯ ಸಾಳುಂಖೆ(21), ರಾಜೇಶ್ ಕಾಟ್ಕರ್(35) ಹಾಗೂ ರತ್ನಿಗಿರಿಯ ಅಂಶ್ ಚವಾಣ್(19) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ 8 ಯುವಕರು ಸ್ಕಾರ್ಪಿಯೋ ಎಸ್ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಕಡಿದಾದ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಆಳವಾದ ಪ್ರಪಾತಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.
Advertisement