

ನವದೆಹಲಿ: 'ಗ್ಲೋಬಲ್ ಸೌತ್' (ಜಾಗತಿಕ ದಕ್ಷಿಣ ರಾಷ್ಟ್ರಗಳು ಅಥವಾ ಬ್ರಿಕ್ಸ್ ದೇಶಗಳು) ಕೇವಲ 'ನಿಯಮಗಳನ್ನು ಪಾಲಿಸುವ ಬದಲು 'ನಿಯಮಗಳನ್ನು ರೂಪಿಸುವ ಶಕ್ತಿಯಾಗಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪ್ರತಿಪಾದಿಸಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಯೊಂದು ಸದಸ್ಯ ರಾಷ್ಟ್ರಕ್ಕೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿರಬೇಕು ಎಂಬುದನ್ನು ಒತ್ತಿ ಹೇಳಿದರು.
ಜಾಗತಿಕ ಭವಿಷ್ಯವನ್ನು ನಾವೆಲ್ಲರೂ ಹಂಚಿಕೊಳ್ಳುವುದಾದರೆ, ಅದನ್ನು ವಿನ್ಯಾಸಗೊಳಿಸುವ ಮತ್ತು ರೂಪಿಸುವ ಹಕ್ಕು ಕೂಡ ಎಲ್ಲ ದೇಶಗಳಿಗೂ ಸಮಾನವಾಗಿ ಸಿಗಬೇಕು. ಭಾರತವು ಈ ಪರಿವರ್ತನೆಯ ನಾಯಕತ್ವ ವಹಿಸಲು ಸಂಪೂರ್ಣ ಸಿದ್ಧವಾಗಿದೆ. ಎಂದು ಪ್ರಧಾನಿ ಮೋದಿ ಘೋಷಿಸಿದರು.
"ನಾವು 'ಗ್ಲೋಬಲ್ ಸೌತ್' ಅನ್ನು 'ನಿಯಮ ಪಾಲಿಸುವವ'ರಿಂದ 'ನಿಯಮ ರೂಪಿಸುವವ'ರಾಗಿ ಬದಲಾಗಲು ಶ್ರಮಿಸಬೇಕು. ಬ್ರಿಕ್ಸ್ ಮೂಲಕ, ನಾವು 'ಗ್ಲೋಬಲ್ ಸೌತ್' ರಾಷ್ಟ್ರಗಳ ಯುವ ರಾಜತಾಂತ್ರಿಕರು ಮತ್ತು ನೀತಿ ನಿರೂಪಕರಿಗೆ ಮಾತುಕತೆ ನಡೆಸುವ ಕೌಶಲ, ಪ್ರಾಯೋಗಿಕ ತರಬೇತಿ ಮತ್ತು ಕಾನೂನು ವಿಷಯಗಳಲ್ಲಿ ಪರಿಣತಿಯನ್ನು ಒದಗಿಸಬಹುದು" ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
“ಭಾರತಕ್ಕೆ ನಿಮ್ಮನ್ನೆಲ್ಲ ಸ್ವಾಗತಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಭಾರತದ ಬ್ರಿಕ್ಸ್ ಅಧ್ಯಕ್ಷತೆಯು ‘ಜನಕೇಂದ್ರಿತ’ ಮತ್ತು ‘ಮಾನವೀಯತೆಗೆ ಪ್ರಥಮ ಆದ್ಯತೆ’ ಎಂಬ ಪರಿಕಲ್ಪನೆಯ ಮೇಲೆ ಆಧಾರಿತವಾಗಿದೆ. ಚೇತರಿಕೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ನಮ್ಮ ಪ್ರಮುಖ ಆದ್ಯತೆಗಳಾಗಿವೆ. ಈ ಆಶಯಗಳೊಂದಿಗೆ ನಾವು ಬ್ರಿಕ್ಸ್ ಶೃಂಗಸಭೆಯನ್ನು ಸಾಮಾನ್ಯ ಜನರೊಂದಿಗೆ ಬೆಸೆಯಲು ವಿಶೇಷ ಒತ್ತು ನೀಡಿದ್ದೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಸ್ತುತ ಜಾಗತಿಕ ಆಡಳಿತ ವ್ಯವಸ್ಥೆ ಪಿರಮಿಡ್ನಂತಿದ್ದು, ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಶಕ್ತಿ ಕೆಲವೇ ದೇಶಗಳು ಹಾಗೂ ಸಂಸ್ಥೆಗಳ ಬಳಿ ಕೇಂದ್ರೀಕೃತವಾಗಿದೆ. ಈ ನಿರ್ಧಾರಗಳಿಂದ ನೇರವಾಗಿ ಪರಿಣಾಮಕ್ಕೊಳಗಾಗುವ ಹಲವು ದೇಶಗಳಿಗೆ ನಿರ್ಧಾರ ಪ್ರಕ್ರಿಯೆಯಲ್ಲಿ ಸಮರ್ಪಕ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದರು. ಎಲ್ಲ ದೇಶಗಳ ಧ್ವನಿಗೂ ಸೂಕ್ತ ಪ್ರಾತಿನಿಧ್ಯ ದೊರೆಯುವಂತಹ ಜಾಗತಿಕ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಬ್ರಿಕ್ಸ್ ಕೆಲಸ ಮಾಡಬೇಕು ಎಂದು ಪ್ರಧಾನಿ ಹೇಳಿದರು.
ಬ್ರಿಕ್ಸ್ನ 20 ವರ್ಷಗಳ ಪಯಣವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಒಕ್ಕೂಟದಲ್ಲಿ ಇರುವ ಏಕತೆ ಮತ್ತು ಒಮ್ಮತವನ್ನು ಜಾಗತಿಕ ವೇದಿಕೆಯಲ್ಲಿ ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವ ಸಮಯ ಬಂದಿದೆ ಎಂದು ಹೇಳಿದರು.
ಬ್ರಿಕ್ಸ್ ದೇಶಗಳು ಯಾರ ವಿರುದ್ಧವೂ ಅಲ್ಲ
ಬ್ರಿಕ್ಸ್ ರಾಷ್ಟ್ರಗಳು ಪರಸ್ಪರರ ದೃಷ್ಟಿಕೋನಗಳನ್ನು ಗೌರವಿಸುತ್ತವೆ ಮತ್ತು ಸರ್ವಸಮ್ಮತಿಯಿಂದ ಮುಂದೆ ಸಾಗುತ್ತವೆ ಎಂದು ಪುನರುಚ್ಚರಿಸಿದ ಪ್ರಧಾನಿ ಮೋದಿ, “ನಾವು ಯಾರ ವಿರುದ್ಧವೂ ಇಲ್ಲ, ಬದಲಿಗೆ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಲು ನಾವು ಪ್ರಯತ್ನಿಸುತ್ತೇವೆ” ಎಂದು ಪಾಶ್ಚಿಮಾತ್ಯ ದೇಶಗಳಿಗೆ ಸಂದೇಶ ರವಾನಿಸಿದ್ದಾರೆ.