'ಎಕ್ಸ್ಕ್ಯೂಸ್ ಮಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಅಜಯ್ ರಾವ್ ಅವರು ಡಿಸೆಂಬರ್ 18ರಂದು ಕೊಪ್ಪಳದಲ್ಲಿನ ದೇವಸ್ಥಾನವೊಂದರಲ್ಲಿ ಸ್ವಪ್ನ ಅವರೊಂದಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಟಿ, ನಿರ್ದೇಶಕಿ ರೂಪಾ ಅಯ್ಯರ್ ಮತ್ತು ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರು ಇದೇ ವರ್ಷ ಆಗಸ್ಟ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
'ಜಾಲಿಡೇಸ್' ಚಿತ್ರದ ಯಶಸ್ವಿ ಜೋಡಿ ಸ್ಫೂರ್ತಿ ಹಾಗೂ ವಿಶ್ವಾಸ್ ಇದೇ ವರ್ಷ ಹಸೆಮಣೆ ಏರಿದರು. ಸುಮಾರು ಏಳು ವರ್ಷಗಳ ತಮ್ಮ ಪ್ರೇಮ ಸಂಬಂಧಕ್ಕೆ ಈ ವರ್ಷ ಅಧಿಕೃತ ಮುದ್ರೆ ಬಿದ್ದ ಖುಷಿಯಲ್ಲಿದ್ದಾರೆ ಈ ನವ ದಂಪತಿಗಳು.
ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಪುತ್ರ ಪನ್ನಾಗ ಅವರು ಗುರುವಾರ(ನಂ.20) ನಿಖಿತಾ ಪ್ರಿಯಾ ಅವರೊಂದಿಗೆ ಹೊಸ ಬಾಳಿಗೆ ಕಾಲಿಟ್ಟರು.
ನಟ ಹರೀಶ್ ರಾಜ್ ಅವರು ಆಗಸ್ಟ್ ತಿಂಗಳಲ್ಲಿ ಎಂ.ಎಸ್ಸಿ ಪದವೀಧರೆ ಶ್ರುತಿ ಲೋಕೇಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.
ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಏಪ್ರಿಲ್ ತಿಂಗಳಲ್ಲಿ ಹಾಲೆಂಡ್ ನಲ್ಲಿ ಹಾರ ಬದಲಾಯಿಸಿಕೊಂಡರು. ಪ್ರೇಯಸಿ ಕ್ಯಾಪಿಪೈಲಿ ಜೊತೆ ಫಾರಿನ್ ನಲ್ಲಿ ಸಪ್ತಪದಿ ತುಳಿದರೂ, ಭಾರತಕ್ಕೆ ವಾಪಸ್ಸಾದ ನಂತ್ರ ಮಂತ್ರಾಲಯದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ನವ ಜೀವನಕ್ಕೆ ಕಾಲಿರಿಸಿದರು.
ಗೀತಸಾಹಿತಿ ಕವಿರಾಜ್ ಅವರ ಮದುವೆ ಮೇ ತಿಂಗಳಲ್ಲಿ ಕುಪ್ಪಳ್ಳಿಯಲ್ಲಿ ನೆರವೇರಿತು. ಕನ್ನಡ ಚಿತ್ರರಂಗದ ಹಲವು ತಾರೆಯರು ಮದುವೆ ಸಮಾರಂಭಕ್ಕೆ ಆಗಮಿಸಿ ನೂತನ ದಂಪತಿಗಳನ್ನು ಹರಸಿದರು. ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿರುವ ರಾಜೇಶ್ವರಿ ಅವರನ್ನು ಕವಿರಾಜ್ ಮದುವೆಯಾದರು.
'ಒಲವೇ ಮಂದಾರ' ಖ್ಯಾತಿಯ ನಟ ಶ್ರೀಕಿ ಅವರಿಗೂ ಇದೇ ವರ್ಷ ಕಂಕಣ ಬಲ ಕೂಡಿ ಬಂತು. ಗುರುಹಿರಿಯರು ನಿಶ್ಚಯಿಸಿದಂತೆ ಎಂ.ಬಿ.ಎ ಓದಿರುವ ವೀಣಾ ಅವರನ್ನ ಬಾಳಸಂಗಾತಿಯನ್ನಾಗಿ ಶ್ರೀಕಿ ಸ್ವೀಕರಿಸಿದರು.