ಅರಸು ಚಿಂತನೆ ಅನುಷ್ಠಾನಕ್ಕೆ ಬದ್ಧ: ಸಿಎಂ ಸಿದ್ದರಾಮಯ್ಯ

ಎಷ್ಟೇ ಟೀಕೆ ಬಂದರೂ ಅರಸು ಕಾರ್ಯಕ್ರಮಗಳ ಅನುಷ್ಠಾನದಿಂದ ಹಿಂದೆ ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ...
ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ದೇವರಾಜ ಅರಸು ಪ್ರಶಸ್ತಿ ಪ್ರದಾನ(ಕೆಪಿಎನ್ ಚಿತ್ರ)
ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ದೇವರಾಜ ಅರಸು ಪ್ರಶಸ್ತಿ ಪ್ರದಾನ(ಕೆಪಿಎನ್ ಚಿತ್ರ)

ಮೈಸೂರು: ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಷ್ಟೇ ಟೀಕೆ ಬಂದರೂ ಅರಸು ಕಾರ್ಯಕ್ರಮಗಳ ಅನುಷ್ಠಾನದಿಂದ ಹಿಂದೆ ಸರಿಯಲ್ಲ ಎಂದು ಹೇಳಿದ್ದಾರೆ.

ಅರಸು ಹೆಸರು ಸ್ಥಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿನ ಎರಡು ಸಾವಿರ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಡಿ.ದೇವರಾಜ ಅರಸು ಹೆಸರು ನಾಮಕರಣ ಮಾಡುವುದಾಗಿ ಘೋಷಿಸಿದರು. ದೇವರಾಜ ಅರಸು ಜನ್ಮಶತಮಾನೋತ್ಸವ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮತ್ರಿ ಸಿದ್ದರಾಮಯ್ಯ.  ಅರಸು ಅವರು ಪ್ರತಿನಿಧಿಸಿದ್ದ ಹುಣಸೂರಿಗೆ ತೆರಳಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಬಳಿಕ ಹುಣಸೂರಿನಲ್ಲಿ ದೇವರಾಜ ಅರಸು ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅರಸು ಅವರ ಹುಟ್ಟೂರು, ಕಲ್ಲಹಳ್ಳಿಗೆ ತೆರೆಳಿ ದೇವರಾಜ ಅರಸು ಅವರ ಸಮಾಧಿಗೆ ಗೌರವ ಸಲ್ಲಿಸಿದರು. ಅರಸು ಜನಿಸಿದ ಬೆಟ್ಟದತುಂಗ ಮತ್ತು ದತ್ತು ಪುತ್ರನಾಗಿ ಬೆಳೆದ ಕಲ್ಲಹಳ್ಳಿ ಗ್ರಾಮವನ್ನು ಸರ್ಕಾರ ದತ್ತು ಸ್ವೀಕರಿಸಿ  ಅಭಿವೃದ್ಧಿಪಡಿಸುವುದಾಗಿ ಘೋಷಿಸಿದರು.  

ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವರಾಜ ಅರಸು ಜನ್ಮ ಶತಮಾನೋತ್ಸವದ ವಾರ್ಷಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅರಸು ಅವರ ಕಾಳಜಿಯ ಅಹಿಂದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಬದ್ಧ. ಯಾವ ಟಿಕೆಗೂ ಜಗ್ಗದೆ ಅವರ ಚಿಂತನೆ- ಕಾಳಜಿಯನ್ನು ಕಾರ್ಯರೂಪಕ್ಕಿಳಿಸುವೆ. ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯದಲ್ಲಿ ತೆರೆಯಲಾಗಿರುವ 2 ಸಾವಿರ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯಗಳು ಎಂದು ನಾಮಕರಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದೇ ವೇಳೆ ದೇವರಾಜ ಅರಸು ಹೆಸರಿನಲ್ಲಿ ಸ್ಥಾಪಿಸಲಾಗಿರುವ ಚೊಚ್ಚಲ ವಾರ್ಷಿಕ ಪ್ರಶಸ್ತಿಯನ್ನು ಮಾಜಿ ಸಚಿವ ಆರ್.ಎಲ್ ಜಾಲಪ್ಪ ಅವರಿಗೆ ನೀಡಲಾಯಿತು. ದೇವರಾಜ ಅರಸು ಅವರ ಭಾವ ಚಿತ್ರ, ಭಿನ್ನವತ್ತಳೆ, 2 ಲಕ್ಷ ನಗದು, ಫಲತಾಂಬೂಲ ನೀಡಿ  ಗೌರವಿಸಲಾಯಿತು. ದೇವರಾಜ ಅರಸು ಅವರ ಅಳಿಯ ನಾಗರಾಜ ಅರಸ್, ಮಾಜಿ ಸಂಸದ ವಿಶ್ವನಾಥ್, ನಿವೃತ್ತ ಡಿವೈಎಸ್ ಪಿ ಕೆ.ಎಸ್ ಸದಾನಂದ ಅವರನ್ನು ಸನ್ಮಾನಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com