ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಸಂಸತ್ತಿನ ಉಭಯಸದನಗಳಲ್ಲೂ ಭಾರೀ ಕೋಲಾಹಲ ಸೃಷ್ಟಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಕೋರ್ಟ್ ಗೆ ಹಾಜರಾಗಬೇಕೆಂಬ ವಿಷಯದ ಹಿನ್ನೆಲೆಯಲ್ಲಿ ಗದ್ದಲ ಏರ್ಪಟ್ಟಿದ್ದರಿಂದ ಉಭಯ ಸದನಗಳ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತಂತೆ ಡಿಸೆಂಬರ್ 19 ರಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಖುದ್ದು ಹಾಜರಾಗಬೇಕೆಂದು ದೆಹಲಿಯ ಪಟಿಯಾಲಾ ಕೋರ್ಟ್ ಸೂಚನೆ ನೀಡಿದೆ.
ಕಾಂಗ್ರೆಸ್ ಯಾಕೆ ಪ್ರತಿಭಟನೆ ನಡೆಸುತ್ತಿದೆ ಎಂದು ಲೋಕಭಾ ಸ್ಪೀಕರ್ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿದರು. ಆದರೆ ತಮ್ಮ ಮುಂಭಾಗದಲ್ಲೇ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕುಳಿತಿದ್ದು, ಸ್ಪೀಕರ್ ಪ್ರಶ್ನೆಗೆ ಖರ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು.
ಮತ್ತೊಂದೆಡೆ ರಾಜ್ಯಸಭೆಯಲ್ಲೂ ಸದನದ ಬಾವಿ ಸಮೀಪ ಧಾವಿಸಿದ್ದ ಕಾಂಗ್ರೆಸ್ ಸದಸ್ಯರು, ಸರ್ವಾಧಿಕಾರವನ್ನು ಸಹಿಸಲ್ಲ, ಸೇಡಿನ ರಾಜಕೀಯಕ್ಕೆ ಅವಕಾಶ ಕೊಡಲ್ಲ ಎಂದು ಘೋಷಣೆ ಕೂಗಿ ಗದ್ದಲ ಮುಂದುವರಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆ 11.30ಕ್ಕೆ ಮುಂದೂಡಲಾಯಿತು.
Advertisement