
ಬೆಂಗಳೂರು: ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಹಿಂದೂ ವಿರಾಟ ಸಮಾವೇಶ ಹಾಗೂ ಸುವರ್ಣ ಜಯಂತಿ ಆಚರಣೆಗೆ ಪ್ರವೀಣ್ ಭಾಯ್ ತೊಗಾಡಿಯಾ ಹಾಜರಾಗಬಹುದು. ಆದರೆ ಭಾಷಣ ಮಾಡುವ ಹಾಗಿಲ್ಲ ಎಂದು ಅಡ್ವೊಕೇಟ್ ಜನರಲ್ ಪ್ರೊ .ರವಿವರ್ಮ ಕುಮಾರ್ ಮೌಖಿಕವಾಗಿಹೈಕೋರ್ಟ್ಗೆ ತಿಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ನ ಸುವರ್ಣ ಜಯಂತಿ ಆಚರಣೆಗೆ ಭಾಗವಹಿಸಲು ಇಚ್ಛಿಸಿದ್ದ ತೊಗಾಡಿಯಾ ಅವರಿಗೆ ನಗರ ಪ್ರವೇಶಿಸದಂತೆ ಆಯುಕ್ತರು ಆದೇಶ ಹೊರಡಿಸಿದ್ದರು. ಇದನ್ನು ತೊಗಾಡಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದ ಮೂಲಭೂತ ಹಕ್ಕಾಗಿದ್ದು ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಅವರ ವಿರುದ್ದ ದಾಖಲಾದ ಪ್ರಕರಣಗಳು ಹತ್ತು ವರ್ಷದ ಹಿಂದೆ ನಡೆದ ಘಟನೆಯಾಗಿದ್ದು, ಅದರ ಆಧಾರದ ಮೇಲೆ ನಗರ ಪ್ರವೇಶಿಸದಂತೆ ನಿರ್ಬಂಧ ಹೇರಿರುವುದು ಸರಿಯಲ್ಲ. ಅಲ್ಲದೇ ಅವರು ನಡೆಸಿದ ಸಭೆಗಳಲ್ಲಿ ಯಾರೋ ಮಾಡಿದ ತಪ್ಪಿಗೆ ಅವರ ವಿರುದ್ದ ದೂರು ದಾಖಲಿಸಲಾಗಿದೆ. ಕಳೆದೆರಡು ತಿಂಗಳಿನಿಂದ ಅವರು ದೇಶದ ವಿವಿಧೆಡೆ 8 ಭಾರಿ ಸಭೆಗಳನ್ನು ಆಯೋಜಿಸಿದ್ದರು. ಆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಯೂ ನಡೆದ ಉದಾಹರಣೆ ಇಲ್ಲ. ಇದನ್ನು ಪರಿಗಣಿಸದೇ 10 ವರ್ಷದ ಹಿಂದೆ ನಡೆದ ಘಟನೆಯನ್ನು ಆಧಾರವಾಗಿಟ್ಟುಕೊಂಡು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಸರಿಯಲ್ಲ ಎಂದರು. ಅಲ್ಲದೇ ನಗರ ಪ್ರವೇಶಿಸದಂತೆ ಆದೇಶ ಹೊರಡಿಸುವ ಅಧಿಕಾರ ಆಯುಕ್ತರಿಗೆ ಇಲ್ಲ. ಆದ್ದರಿಂದ ಪೋಲೀಸರು ಹೊರಡಿಸಿರುವ ಆದೇಶವನ್ನು ರದ್ದು ಮಾಡಬೇಕು. `ಕೋಮು ಸೌಹಾರ್ದ ಹಾಗೂ ಸಾಮರಸ್ಯ ಕದಡುವ ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ' ಎಂದು ಲಿಖಿತ ರೂಪದಲ್ಲಿ ನೀಡಲು ನಾವು ಸಿದ್ದವಿದ್ದೇವೆ. ಸಂಪೂರ್ಣ ಕಾರ್ಯಕ್ರಮವನ್ನು ವಿಡಿಯೋ ಚಿತ್ರೀಕರಣಗೊಳಿಸಿ ಹೈಕೋರ್ಟ್ಗೆ ಸಲ್ಲಿಸುತ್ತೇವೆ. ಸರ್ಕಾರ ಅವರ ಭಾಷಣಕ್ಕೆ ಅವಕಾಶ ನೀಡದಿರಬಹುದು. ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಭಾಷಣ ಮಾಡಬಹುದು. ಸರ್ಕಾರ ಅದನ್ನು ಹೇಗೆ ತಡೆಯಲು ಸಾಧ್ಯ ಎಂದು ಆಚಾರ್ಯ ವಾದ ಮಂಡಿಸಿದರು. ನಂತರ ಇದಕ್ಕೆ ಪ್ರತಿಕ್ರಯಿಸಿದ ಫ್ರೊ .ರವಿವರ್ಮ ಕುಮಾರ್, ತೊಗಾಡಿಯಾ ಎಲ್ಲೆಡೆ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವಂಥ ಪ್ರಚೋದನ ಕಾರಿ ಹೇಳಿಕೆ ನೀಡುತ್ತಾರೆ. ಆತ ಒಬ್ಬ ಅಪಾಯಕಾರಿ ಮನುಷ್ಯನಾಗಿದ್ದು, ಅವರ ಪೂರ್ವಾಪರ ತಿಳಿದುಕೊಂಡು ಆಯುಕ್ತರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಅವರು ಮಾಡುವ ಪ್ರಚೋದನಕಾರಿ ಭಾಷಣದಿಂದ ಶಾಂತಿ ಸೌಹಾರ್ದತೆ ಕದಡುವ ಸಾಧ್ಯತೆಯಿದೆ. ಶುಕ್ರವಾರ ಕೊಪ್ಪಳದಲ್ಲಿ ವಿಹಿಂಪ ಆಯೋಜಿಸಿರುವ ಸುವರ್ಣ ಸಂಭ್ರಮ ಕಾರ್ಯಕ್ರದಲ್ಲಿ ಕೋಮು ಗಲಭೆ ನಡೆದಿರುವ ವರದಿ ಆಗಿದ್ದು, ಬೆಂಗಳೂರಿಗೆ ಅವರು ಆಗಮಿಸಿದರೆ ಇದೇ ಘಟನೆ ಮರುಕಳುಸುವ ಸಾಧ್ಯತೆಗಳಿವೆ ಎಂದು ವಾದಿಸಿದರು. ವಾದ ವಿವಾದ ಆಲಿಸಿದ ಏಕಸದಸ್ಯ ಪೀಠ, ಶುಕ್ರವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.
Advertisement