ಕಬ್ಬು ಬಾಕಿ ಒಂದು ತಿಂಗಳಲ್ಲಿ ಬಿಡುಗಡೆ

ಕಬ್ಬು ಬೆಳೆಗಾರರ ಬಾಕಿ ಹಣವನ್ನು ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು...
ಇಂಧನ ಸಚಿವ ಡಿ.ಕೆ.ಶಿವಕುಮಾರ್
ಇಂಧನ ಸಚಿವ ಡಿ.ಕೆ.ಶಿವಕುಮಾರ್

ವಿಧಾನಸಭೆ: ಕಬ್ಬು ಬೆಳೆಗಾರರ ಬಾಕಿ ಹಣವನ್ನು ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸರ್ಕಾರ ಕಬ್ಬು ಬೆಳೆಗಾರರ ಬಾಕಿ ಹಣವನ್ನು ಇನ್ನೂ ನೀಡಿಲ್ಲ ಎಂಬ ವಿಚಾರವನ್ನು ಕಲಾಪ ಆರಂಭಗೊಳ್ಳುತ್ತಿದಂತೆ ಬಿಜೆಪಿ ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಉತ್ತರ ನೀಡುವುದಕ್ಕೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರಾಗಲಿ, ಸಂಬಂಧಪಟ್ಟ ಸಚಿವರಾಗಲೀ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ  ಎದುರಿನ ಆವರಣಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಸರ್ಕಾರ ಕೊಟ್ಟ ಮಾತನ್ನು ತಪ್ಪಿದೆ. ರೈತರ ಸಮಸ್ಯೆ ಪ್ರಸ್ತಾಪಿಸಿದರೆ ಕೇಳುವುದಕ್ಕೆ ಸದನದಲ್ಲಿ ಯಾರೂ ಇಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು.

ಗದ್ದಲದ ವಾತಾವರಣ ನಿರ್ಮಾಣವಾದ್ದರಿಂದ ಕಲಾಪವನ್ನು 10 ನಿಮಿಷ ಕಾಲ ಮುಂದೂಡಲಾಯಿತು. ಕಲಾಪ ಮತ್ತೆ ಆರಂಭಗೊಂಡರು ಬಿಜೆಪಿ ಸದಸ್ಯರು ಪ್ರತಿಭಟನೆ ಕೈ ಬಿಡಲಿಲ್ಲ. ಆಗ ಮಧ್ಯಪ್ರವೇಶ ಮಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಕ್ಕರೆ ಉದ್ಯಮದಲ್ಲಿ ತೊಡಗಿಸಿಕೊಂಡವರು ನಮ್ಮ ಪಕ್ಷದಲ್ಲೂ ಇದ್ದಾರೆ. ನಿಮ್ಮ ಪಕ್ಷದಲ್ಲೂ ಇದ್ದಾರೆ. ಆದರೆ ಇದು ಕೇವಲ ಆರೋಪ -ಪ್ರತ್ಯಾರೋಪದಿಂದ ಬಗೆಹರಿಯುವಂತದ್ದಲ್ಲ. ಇಬ್ಬರು ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸೋಣ ಎಂದು ಮನವಿ ಮಾಡಿದರು.

ಇಂಥ ಬಾಯಿ ಮಾತಿನ ಭರವಸೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಬಿಜೆಪಿ ಸದಸ್ಯರು ಪ್ರತಿವಾದ ಮಾಡಿದ್ದು ಮಾತ್ರವಲ್ಲ, ಇಂತಿಷ್ಟು ದಿನದಲ್ಲಿ ಬಾಕಿ ಹಣ ಬಿಡುಗಡೆ ಮಾಡಿಸುವ ಭರವಸೆ ನೀಡಿ ಎಂದು ಹೇಳಿದರು. ಹೀಗಾಗಿ ಸುಗಮ ಕಲಾಪ ದೃಷ್ಟಿಯಿಂದ ಬಿಜೆಪಿಯನ್ನು ಮೆತ್ತಗಾಗಿಸುವ ಅನಿವಾರ್ಯತೆಗೆ ಸಿಲುಕಿದ ಡಿ.ಕೆ.ಶಿವಕುಮಾರ್ ಇನ್ನೊಂದು ತಿಂಗಳೊಳಗಾಗಿ ಬಾಕಿ ಹಣ ಬಿಡುಗಡೆಗೊಳಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು  ಎಂದು ಭರವಸೆ ನೀಡಿದ್ದು ಮಾತ್ರವಲ್ಲ, ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದ ವಿದ್ಯುತ್ ಬಿಲ್‍ನ್ನು ಪರಿವರ್ತನೆ ಮಾಡಿಕೊಡುವ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com