ಬೆಂಗಳೂರು: ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವವರು ಹಣ ಪಾವತಿಸಿ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಈ ವರ್ಷ ಸರ್ಕಾರ ವಿದ್ಯುತ್ ಪೂರೈಸುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಖಡಕ್ ಆಗಿ ಹೇಳಿದ್ದಾರೆ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಶುಕ್ರವಾರ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಂಚಾಯಿತಿ, ಮುನಿಸಿಪಲ್ ಕಾರ್ಪೋರೇಷನ್, ಗ್ರಾ.ಪಂ. ಸೇರಿದಂತೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವವರು ಹಣ ಪಾವತಿಸದ ಹೊರತು ಯಾವುದೇ ಕಾರಣಕ್ಕೂ ವಿದ್ಯುತ್ ನೀಡುವುದಿಲ್ಲ ಹಾಗೂ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದರು.
ಪಂಚಾಯ್ತಿಗಳಿಂದ ರು. 3 ಸಾವಿರ ಕೋಟಿ ಸೇರಿದಂತೆ ಮುನಿಸಿಪಲ್ ಕಾರ್ಪೋರೇಷನ್ಗಳು ಸಾಕಷ್ಟು ಬಾಕಿ ಉಳಿಸಿಕೊಂಡಿದ್ದು, ರು.12900 ಕೋಟಿ ವಿದ್ಯುತ್ ಹಣ ಪಾವತಿ ಬಾಕಿ ಇದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಹಾಗಾಗಿ ಸರಿಯಾಗಿ ಬಿಲ್ ಪಾವತಿಸಿದವರಿಗೆ ಮಾತ್ರ ವಿದ್ಯುತ್ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಗತ್ಯಬಿದ್ದಲ್ಲಿ ಸಬ್ಸಿಡಿ ನೀಡಲಾಗುವುದು ಎಂದ ಅವರು, ಖಾಸಗೀಕರಣಕ್ಕೆ ಉತ್ತೇಜನ ನೀಡುವುದಿಲ್ಲ ಎಂದರು.
22 ಗಂಟೆ ವಿದ್ಯುತ್
ರಾಜ್ಯದ ಜನತೆಗೆ ದಿನವಿಡೀ ವಿದ್ಯುತ್ ನೀಡುವ ಉದ್ದೇಶ ಸರ್ಕಾರಕ್ಕಿದೆ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕನಿಷ್ಠ 22 ಗಂಟೆ ಸಮರ್ಪಕ ವಿದ್ಯುತ್ ನೀಡಲಾಗುವುದು. ಈಗಾಗಲೇ ಯಲಹಂಕದಲ್ಲಿ ಗ್ಯಾಸ್ ಪ್ಲಾಂಟ್ ಆರಂಭಿಸಲು ಸಿದಟಛಿತೆ ನಡೆಸಲಾಗಿದೆ. ಇದರಿಂದ 300 ಮೆ.ವ್ಯಾ.ವಿದ್ಯುತ್ ಸಿಗಲಿದೆ. ಗೌರಿಬಿದನೂರು-ಹಿರಿಯೂರು ಮಾರ್ಗವಾಗಿ ಹಾದುಬರುವ ವಿದ್ಯುತ್ ಲೈನ್ ತೊಂದರೆಯಾಗಿದ್ದು, ಅದನ್ನು ಸರಿಪಡಿಸಲಾಗುತ್ತಿದ್ದು, 300 ಮೆ.ವ್ಯಾ. ವಿದ್ಯುತ್ ಲಭಿಸಲಿದೆ ಎಂದರು.
Advertisement