ಬೆಂಗಳೂರು: ಮುಂಬರುವ ಶೈಕ್ಷಣಿಕ ಸಾಲಿನಿಂದ ಬಿಪಿಎಲ್ ವರ್ಗಕ್ಕೆ ಸೇರಿದ ಮಕ್ಕಳಿಗೆ ಆರ್ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆಯಲು ಮೊದಲ ಆದ್ಯತೆ ಸಿಗಲಿದೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಶಿಕ್ಷಣ ಹಕ್ಕು ಕಾಯ್ದೆಯಡಿ ಬಿಪಿಎಲ್ ಕುಟುಂಬದ ಮಕ್ಕಳಿಗೆ ಪ್ರಥಮ ಆದ್ಯತೆ ನೀಡಬೇಕೆಂಬ ಉದ್ದೇಶವಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಇದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು. ಯಾವುದೇ ಶಾಲೆಯಲ್ಲಿ ಆರ್ಟಿಇ ಕಾಯ್ದೆಯಡಿ ಪ್ರವೇಶ ಪಡೆಯುವ ಮಕ್ಕಳು ಆಯಾ ಪ್ರದೇಶದ ಶಾಲೆಗಳಲ್ಲಿ ಸೇರಬೇಕು. ಆದರೆ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸುಳ್ಳು ವಿಳಾಸ ನೀಡಿರುವುದು ಕಂಡುಬಂದಿದೆ. ಇದರಿಂದ ಅರ್ಹ ಮಕ್ಕಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಇಂಥ ಪ್ರಕರಣಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು. ಎರಡು ಪ್ರದೇಶದಲ್ಲಿ ಶಾಲೆಗಳಿಗೆ ಅರ್ಜಿ ಹಾಕಬಾರದೆಂಬ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದ ಅವರು, ಶಾಲೆಯಲ್ಲಿ ಸೀಟು ಪಡೆಯಲು ಅನೇಕರು ಸಂಬಂಧಪಟ್ಟ ಶಾಲೆಯ ಸಮೀಪ ದಲ್ಲಿ ಮನೆ ಬಾಡಿಗೆ ಕರಾರು ಪತ್ರವನ್ನು ಸೃಷ್ಟಿಸಿಕೊಂಡಿರುವ ಪ್ರಕರಣ ನಡೆದಿದೆ. ಇದಕ್ಕಾಗಿ ಕನಿಷ್ಠ 5 ವರ್ಷವಾದರೂ ನಿವಾಸಿ ಯಾಗಿರಬೇಕೆಂಬ ನಿಯಮ ಮಾಡಬೇಕೆಂಬ ಅಭಿಪ್ರಾಯವೂ ಇದೆ ಎಂದು ಹೇಳಿದರು.
ನೇಮಕಾತಿಗೆ ಕ್ರಮ: ಜುಲೈ ಅಂತ್ಯದೊಳಗೆ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಉಪನ್ಯಾಸಕರು ಸೇರಿದಂತೆ 11 ಸಾವಿರ ಶಿಕ್ಷಕ-ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಇಲಾಖೆಯಲ್ಲಿ 28 ಸಾವಿರ ಹುದ್ದೆಗಳು ಖಾಲಿ ಇವೆ. ಸದ್ಯ 11 ಸಾವಿರ ಶಿಕ್ಷಕರ ನೇಮಕಾತಿಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಉಳಿದ ಹುದ್ದೆಗಳನ್ನು ಹಂತಹಂತವಾಗಿ ನೇಮಿಸಲಾಗುವುದು. ಖಾಸಗಿ ಶಾಲಾ ಕಾಲೇಜುಗಳಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದರ ಬಗ್ಗೆ ಅಧಿಕೃತವಾಗಿ ಯಾವುದೇ ದೂರು ಬಂದಿಲ್ಲ ಎಂದರು.
ಸಮವಸ್ತ್ರ: ಮುಂದಿನ ತಿಂಗಳ 15ರೊಳಗಾಗಿ ಬೆಳಗಾವಿ, ಕೊಪ್ಪಳ ಸೇರಿ ಉತ್ತರ ಕರ್ನಾಟಕ ಭಾಗದ ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ಪೂರೈಸಲಾಗುವುದು. ಸಮವಸ್ತ್ರ ಪೂರೈಸುವ ಅವಕಾಶ ಪಡೆದುಕೊಂಡು ಸರ್ಕಾರದ ಎರಡು ನಿಗಮಗಳವರು ಸಿಎಂ ಮುಂದೆಯೂ ನಿಗದಿತ ಸಮಯ ದೊಳಗೆ ಸಮವಸ್ತ್ರ ಪೂರೈಸುವ ಭರವಸೆ ನೀಡಿದ್ದಾರೆ ಎಂದುಕಿಮ್ಮನೆ ಮಾಹಿತಿ ನೀಡಿದರು.
Advertisement