ವಿಧಾನ ಪರಿಷತ್ತು: ರಾಜ್ಯದ 8162.70 ಕಿ.ಮೀ ಉದ್ದದ 44 ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಭೂಸಾರಿಗೆ ಮಂತ್ರಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಸೋಮಣ್ಣ ಹಾಗೂ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದರು. ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರದೊಂದಿಗೆ ನಿರಂತರವಾಗಿ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಅಲ್ಲದೆ, ಈಗಾಗಲೇ ತಾವು ಕೇಂದ್ರ ಸಾರಿಗೆ ಸಚಿವರನ್ನು ಭೇಟಿ ಮಾಡಿ ಈ ಕುರಿತು ವಿನಂತಿಸಿರುವುದಾಗಿ ತಿಳಿಸಿದ ಅವರು, ರಾಜ್ಯದ ವಿವಿಧೆಡೆ ನಿರ್ಮಾಣಗೊಂಡಿರುವ ಹೆದ್ದಾರಿಗಳಲ್ಲಿ ಇನ್ನೂ 20-28 ವರ್ಷಗಳ ಕಾಲ ಶುಲ್ಕ ಆಕರಣೆ ಮುಂದುವರಿಯಲಿದೆ ಎಂದೂ ಹೇಳಿದರು.
ಮೇಲ್ದರ್ಜೆಗೇರಿಸಲು ಉದ್ದೇಶಿಸಲಾದ ರಸ್ತೆಗಳು: ಚನ್ನರಾಯಪಟ್ಟಣ-ಹೊಳೆನರಸೀಪುರ ಮಾರ್ಗದ ಮೂಲಕ ಸಕಲೇಶಪುರ ಸೇರುವ ಮೈಸೂರು-ಕನಕಪುರ-ಆನೇಕಲ್ ರಸ್ತೆ (187ಕಿ.ಮೀ.), ಬೆಂಗಳೂರು ಹೊರವಲಯ ರಸ್ತೆ (194ಕಿ.ಮೀ.), ಕೊರಟಗೆರೆ- ತುಮಕೂರು ಕುಣಿಗಲ್-ಹುಲಿಯೂರು ದುರ್ಗ-ಮಳವಳ್ಳಿ ರಸ್ತೆ (140ಕಿ.ಮೀ.), ಬೆಳಗಾವಿ-ಬಾಗಲಕೋಟೆ-ಮೆಹಬೂಬ ನಗರ (336 ಕಿ.ಮೀ.), ಹಾಸನ-ಗೋರೂರು-ಗುಂಡ್ಲುಪೇಟೆ (249ಕಿ.ಮೀ.), ಬೆಳಗಾವಿ-ಬಿಜಾಪುರ-ಕಲಬುರಗಿ-ಹುಮ್ನಾಬಾದ್ (144 ಕಿ.ಮೀ.), ಕುಮಟಾ-ಶಿರಸಿ-ಹಾವೇರಿ-ಹರಪನಹಳ್ಳಿ-ಕೂಡ್ಲಗಿ (240ಕಿ.ಮೀ.), ಭಟ್ಕಳ-ಜೋಗ-ಸಿದ್ದಾಪುರ-ಶಿರಸಿ-ಮುಂಡಗೋಡ (210ಕಿ.ಮೀ.), ಕುಮಟಾ-ಸಿದ್ದಾಪುರ-ಹೊನ್ನಾಳಿ-ಪಾವಗಡ (390ಕಿ.ಮೀ.), ಶಿವಮೊಗ್ಗ-ಹೊನ್ನಾಳಿ-ದಾವಣಗೆರೆ (110)ಕಿ.ಮೀ.
Advertisement