ಸಿಐಡಿಯನ್ನೇ ಮೊದಲು ವಿಚಾರಣೆಗೆ ಒಳಪಡಿಸಲಿ
ಹುಬ್ಬಳ್ಳಿ: ಐಎಎಸ್ ಅಧಿಕಾರಿ ಡಿಕೆ. ರವಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮೊದಲು ಸಿಐಡಿ ಅಧಿಕಾರಿಗಳನ್ನೇ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿ ಸಾವಿನ ವಿಷಯದಲ್ಲಿ ಸರ್ಕಾರದ ನಡೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಸಿಐಡಿ ಸಿದ್ಧ ಪಡಿಸಿದ ವರದಿ ಸೋರಿಕೆಯಾಗುವಂತೆ ನೋಡಿಕೊಂಡಿದ್ದೇ ಸರ್ಕಾರ ಎನ್ನುವ ಸಂದೇಹ ವ್ಯಕ್ತವಾಗುತ್ತಿದೆ.
ಸರ್ಕಾರ ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಮಾಡಿದೆ. ಸಿಬಿಐ ಅಧಿಕಾರಿಗಳು ಸಿಐಡಿಯವರನ್ನು ಮೊದಲು ವಿಚಾರಣೆಗೆ ಒಳಪಡಿಸಿದರೆ ಪ್ರಕರಣದ ಹೂರಣ ಹೊರಬರಲು ಸಾಧ್ಯ ಎಂದರು.
ಡಿಕೆ ರವಿ ಪ್ರಕರಣವನ್ನು ಮುಚ್ಚಿ ಹಾಕುವ ಎಲ್ಲ ಪ್ರಯತ್ನಗಳನ್ನು ರಾಜ್ಯ ಸರ್ಕಾರ ಮಾಡಿತ್ತು.
ಪ್ರತಿಪಕ್ಷಗಳ ಹಾಗೂ ಜನರ ಒತ್ತಾಸೆ ಮೇರೆಗೆ ಪ್ರಕರಣ ಸಿಬಿಐಗೆ ವಹಿಸಲಾಯಿತು. ಸರ್ಕಾರದ ಲೋಪವಿಲ್ಲದೇ ಹೋಗಿದ್ದರೆ ಸಿಬಿಐ ತನಿಖೆಗೇಕೆ ಹಿಂದೇಟು ಹಾಕಿತು? ಯಾವ ಸರ್ಕಾರವೂ ಈ ರೀತಿ ನಡೆದು ಕೊಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಧೈರ್ಯವಿದ್ದರೆ ಅರ್ಕಾವತಿ ಭೂ ಕಬಳಿಕೆ ಸೇರಿದಂತೆ 20 ವರ್ಷಗಳಿಂದ ಈಚೆಗೆ ನಡೆದಿರುವ ಸಂದೇಹಾಸ್ಪದ ಎಲ್ಲ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಲಿ. ನಾವು ತನಿಖೆ ಎದುರಿಸಲು ಸಿದ್ಧ. ಕಾಂಗ್ರೆಸ್ಗೆ ಆ ಧೈರ್ಯ ವಿದೆಯೇ ಎಂದು ಸವಾಲು ಹಾಕಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ