ಸಚಿವರಿಗೆ ಬೆಂಡೆತ್ತಿದ ಸಭಾಪತಿ ಶಂಕರಮೂರ್ತಿ !
`ನಿಮ್ಮ ಇಲಾಖೆ ಅಧಿಕಾರಿಗಳಿಗೆ ಸ್ವಲ್ಪ ಮಾನವೀಯತೆ ಪಾಠ ಮಾಡಿ' ಹೀಗೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರು ಖಾರವಾದ ಶಬ್ದಗಳಲ್ಲಿ ಬೆಂಡೆತ್ತಿದ ಪ್ರಸಂಗ ಮೇಲ್ಮನೆಯಲ್ಲಿ ನಡೆಯಿತು. ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಮಹಂತೇಶ ಕೌಜಲಗಿಯವರು ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಶಿಕ್ಷಕರ ವೇತನ ಆಗದೇ ಇರುವ ವಿಚಾರವನ್ನು ಪ್ರಸ್ತಾಪಿಸಿದರು. ಕಳೆದ ಮೂರು ವರ್ಷಗಳಿಂದಲೂ ಸರಿಯಾದ ರೀತಿಯಲ್ಲಿ ವೇತನ ಪಾವತಿಯಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರು, ಈ ವಿಚಾರವಾಗಿಯೇ ನನ್ನ ಕೊಠಡಿಯಲ್ಲಿ ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇನೆ, ಹಣವನ್ನೂ ಬಿಡುಗಡೆ ಮಾಡಿಸಿದ್ದೇನೆ. ಈ ಅಧಿಕಾರಿಗಳಿಗೆ ಸ್ವಲ್ಪವೂ ಮಾನವೀಯತೆಯೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರಲ್ಲದೇ, ಸಚಿವರನ್ನುದ್ದೇಶಿಸಿ, ಮೊದಲು ನೀವು ನಿಮ್ಮ ಅಧಿಕಾರಿಗಳಿಗೆ ಮಾನವೀಯತೆ ಪಾಠ ಮಾಡಿ ಎಂದು ಹೇಳಿದರು. ಅಂಧ ಮಕ್ಕಳು ಓದುವ ಶಾಲೆಯ ಬಗ್ಗೆ ಸ್ವಲ್ಪವೂ ಮಾನವೀಯತೆ ಬೇಡವೇ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ಸಮಜಾಯಿಷಿ ನೀಡಿದ ಸಚಿವರು, ಈ ಸಮಸ್ಯೆ ಪರಿಹಾರ ಮಾಡಲು ಕ್ರಮಕೈಗೊಳ್ಳುವುದಾಗಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ