ವಿಧಾನಸಭೆ: ರಾಜ್ಯಪಾಲರ ಉಪಯೋಗಕ್ಕಾಗಿ ವಾಹನಗಳ ಖರೀದಿಗೆ 94 ಲಕ್ಷ ರೂ. ಹೈಕೋರ್ಟ್ ನ್ಯಾಯಮೂರ್ತಿಗಳ ವಾಹನ ಖರೀದಿಗೆ 5.60 ಕೋಟಿ ರೂ., ಕೃಷಿ ಇಲಾಖೆಗೆ ವಾಹನಗಳ ಖರೀದಿಗೆ 78 ಲಕ್ಷ ರೂ. ಸೇರಿದಂತೆ 6,785.51 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳ ಎರಡನೇ ಕಂತು ಗುರುವಾರ ಮಂಡನೆಯಾಗಿದ್ದು, ಇದರಿಂದಾಗಿ ರಾಜ್ಯದ ಬಜೆಟ್ ಗಾತ್ರ 1,50,205 ಕೋಟಿ ರೂ.ಗಳಿಗೆ ಏರಿಕೆಯಾದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರಕ ಅಂದಾಜು ಮಂಡಿಸಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ನೀಡಲು 2 ಕೋಟಿ ರೂ., ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ವಿಧವಾ ವೇತನ ನೀಡಲು 1.50 ಕೋಟಿ ರೂ. ಮೀಸಲಿಡಲಾಗಿದೆ.
ವಿಧಾನಪರಿಷತ್ ಸಚಿವಾಲಯದ ಆಧುನೀಕರಣಕ್ಕೆ 68 ಲಕ್ಷ ರೂ., ಶಾಸಕರಿಗೆ 16 ಕಾರು ಖರೀದಿಸಲು 1.80 ಕೋಟಿ ರೂ., ದೆಹಲಿಯಲ್ಲಿರುವ ಕರ್ನಾಟಕದ ನಿವಾಸಿ ಆಯುಕ್ತರು, ಸಿಬ್ಬಂದಿಯ ವೈದ್ಯಕೀಯ ವೆಚ್ಚ ಮರು ಪಾವತಿಗೆ 25 ಲಕ್ಷ ರೂ., ಕುಮಾರ ಕೃಪ ಅತಿಥಿ ಗೃಹಕ್ಕೆ 10 ಲಕ್ಷ ರೂ. ಹೆಚ್ಚುವರಿಯಾಗಿ ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ.
Advertisement