ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ ನ್ಯಾ.ಸಂತೋಷ್ ಹೆಗ್ಡೆ ಅವರಂತಹ ದಕ್ಷ ಅಧಿಕಾರಿಗಳು ಮುಂದಿನ ದಿನಗಳಲ್ಲಿ ನೇಮಕಗೊಳ್ಳುವುದು ನಿಶ್ಚಿತವಿಲ್ಲ ಎಂದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು ಅನುಮಾನ ವ್ಯಕ್ತಪಡಿಸಿದ್ದು, ನಮ್ಮ ಕಾಲದಲ್ಲಿ ಹುಟ್ಟು ಹಾಕಿದ ಆ ಸಂಸ್ಥೆಗೆ ನಾನೇ ಮೊದಲ ಆರೋಪಿ ಎಂದಿದ್ದಾರೆ. ಭೂ ಕಬಳಿಕೆ ಹೋರಾಟ ಸಮಿತಿಯಿಂದ ಕಬ್ಬನ್ ಪಾರ್ಕ್ ನ ಸಚಿವಾಲಯ ಕ್ಲಬ್ನಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಎಲ್ಲವನ್ನೂ ಗಮನಿಸಿದ್ದೇನೆ. ಅಲ್ಲಿ ಯಾರ್ಯಾರು ಬಂದು ಹೋದರು, ಕಾಯ್ದೆಯಲ್ಲಿ ಆದ ಬದಲಾವಣೆ ಎಲ್ಲವೂ ತಿಳಿದಿದೆ. ಮೊದಲ ಆರೋಪಿಯಾಗಿ ಹೋದಾಗ ಸಂಸ್ಥೆಯಿಂದ ಸಾಕಷ್ಟು ಕಹಿ ಉಂಡಿದ್ದೆ. ಆದರೂ ಆ ಸಂಸ್ಥೆಯಲ್ಲಿ ಅತ್ಯಂತ ಶ್ರೇಷ್ಠ ಕೆಲಸ ಮಾಡಿದ ಒಬ್ಬ ವ್ಯಕ್ತಿದೃಷ್ಟಿಯಲ್ಲಿದ್ದರೆ ಅದು ಸಂತೋಷ್ ಹೆಗ್ಡೆ. ಅಂತಹ ವ್ಯಕ್ತಿ ಮತ್ತೆ ಆ ಹುದ್ದೆ ಏರುವುದು ಅನುಮಾನ ಎಂದರು. ನ್ಯಾ.ಸಂತೋಷ್ ಹೆಗ್ಡೆ ಅವರ ವರದಿಯಿಂದ ಕೆಲವರು ಜೈಲಿಗೆ ಹೋಗಿರಬಹುದು. ಆದರೆ ರಾಜಕೀಯದಲ್ಲಿ ಹೆಚ್ಚಾಗಿ ಯಾರೂ ಜೈಲಿಗೆ ಹೋಗುವುದಿಲ್ಲ. ಈ ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿದ್ದೇನೆ. ವ್ಯವಸ್ಥೆ ಕೆಟ್ಟು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.