ರಾಜಕೀಯ
ಕಾವೇರಿ ನೀರು- ತಮಿಳುನಾಡು ಅರ್ಜಿಗೆ ಮೇಲ್ಮನವಿ
ಕಾವೇರಿಯಿಂದ 45 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ...
ಬೆಂಗಳೂರು: ಕಾವೇರಿಯಿಂದ 45 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದುಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ನಾವು ಮಾಡಿದ ಮನವಿಗೆ ಕೇಂದ್ರ ಜಲಮಂಡಳಿ ಒಪ್ಪಿಗೆ ನೀಡಿದ್ದು, ವಿಪತ್ತು ವಿಶ್ಲೇಷಣೆಗೆ ಉಪಸಮಿತಿ ರಚಿಸಿದೆ. ಆ ಸಮಿತಿ ತನ್ನ ವರದಿ ನೀಡುವುದಕ್ಕೆ ಮೊದಲು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಹೆಚ್ಚುವರಿ ನೀರು ಬಿಡುವಂತೆ ಅರ್ಜಿ ಸಲ್ಲಿಸಿದೆ. ನಮ್ಮ ಪ್ರಕಾರ ಈ ಅರ್ಜಿ ಊರ್ಜಿತವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು. ಈ ಪ್ರಕಾರ ತಮಿಳುನಾಡು ಸರ್ಕಾರ ಈ ವರದಿ ಬರುವುದಕ್ಕೆ ಮುನ್ನ ಅರ್ಜಿ ಸಲ್ಲಿಸಲು ಬರುವುದಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ದಸರಾ ರಜೆ ಬಳಿಕ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದ್ದು ತಕರಾರು ಅರ್ಜಿ ಸಲ್ಲಿಸುವ ವಿಚಾರದಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು. ಈಗಿನ ಪರಿಸ್ಥಿತಿಯಲ್ಲಿ ನಾವು ತಮಿಳುನಾಡು ಸರ್ಕಾರ ಬಯಸಿದ 45 ಟಿಎಂಸಿ ನೀರು ಬಿಡುವುದಕ್ಕೆ ಸಾಧ್ಯವೇ ಇಲ್ಲ. ಸಾಮಾನ್ಯ ವರ್ಷದಲ್ಲಿ 192 ಟಿಎಂಸಿ ನೀರು ಬಿಡುಗಡೆ ಮಮಾಡಬೇಕು. ಆದರೆ ಸಂಕಷ್ಟದ ದಿನದಲ್ಲೂ 101 ಟಿಎಂಸಿ ನೀರನ್ನು ಇದುವರೆಗೆ ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಅವರ ವಾದದಲ್ಲಿ ಅರ್ಥವೇ ಇಲ್ಲ ಎಂದು ಅಭಿಪ್ರಾಯಪಟ್ಟರು.