ಬೆಂಗಳೂರು: ರಾಜ್ಯದಲ್ಲಿ ಸದ್ಯ ಬರಗಾಲ ಸ್ಥಿತಿ ನಿರ್ಮಾಣವಾಗಿಲ್ಲ ಎಂದು ನಂತರ ಯೂಟರ್ನ್ ಹೊಡೆದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಜನತೆ ಬರಗಾಲದಿಂದ ತತ್ತರಿಸಿ ಗುಳೆ ಹೋಗುತ್ತಿದ್ದರೂ ಬರಗಾಲವಿಲ್ಲ. ಅಂತ್ಯಂತ ಕಠಿಣ ಬೇಸಿಗೆ ಇರುವುದಿರಂದ ನೀರಿನ ಅಭಾವ ಇದೆ ಎಂದು ಎಚ್ .ಕೆ. ಪಾಟೀಲ್ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಪೂಜಾರಿ ಕಿಡಕಾರಿದ್ದಾರೆ. ಅಲ್ಲದೆ ಅವರು ಈ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಎಚ್.ಕೆ.ಪಾಟೀಲ್ ಅವರು ಮನಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಪ್ರವಾಸ ಹಮ್ಮಿಕೊಂಡರೂ ಸಚಿವ ಪಾಟೀಲ್ ಅವರ ಜೊತೆ ಯಾಕೆ ಹೋಗಿಲ್ಲ ಎಂದು ಜನಾರ್ಧನ ಪೂಜಾರಿ ಪ್ರಶ್ನಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನು ಮುಗಿಸುವಂತಹ ಕೆಲಸ ಮಾಡುವುದು ಬೇಡ ಎಂದು ಎಚ್ .ಕೆ. ಪಾಟೀಲ್ ಅವರಿಗೆ ಹಿರಿಯ ಕಾಂಗ್ರೆಸ್ ನಾಯಕ ಕಿವಿಮಾತು ಹೇಳಿದ್ದಾರೆ.