ಈಶ್ವರಪ್ಪ 'ಹಿಂದ' ಸಮಾವೇಶಕ್ಕೆ ಯಡಿಯೂರಪ್ಪ ವಿರೋಧ: ರ್ಯಾಲಿ ಸಂಬಂಧ ಜಟಾಪಟಿ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ 'ಹಿಂದ' ಸಮಾವೇಶ ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾಧ್ಯಕ್ಷ ...
ಈಶ್ವರಪ್ಪ ಮತ್ತು ಯಡಿಯೂರಪ್ಪ
ಈಶ್ವರಪ್ಪ ಮತ್ತು ಯಡಿಯೂರಪ್ಪ

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ 'ಹಿಂದ' ಸಮಾವೇಶ ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ನಡುವೆ ಜಟಾಪಟಿ ನಡೆದಿದೆ.

ನಮ್ಮದು ರಾಷ್ಟ್ರೀಯ ಪಕ್ಷ. ವಿವಿಧ ಮೋರ್ಚಾಗಳಿವೆ. ಆ ಮೋರ್ಚಾಗಳ ಮೂಲಕವೇ ಸಮಾವೇಶ ಆಯೋಜಿಸಿ.ವಯಕ್ತಿಕವಾಗಿ ಯಾರೂ ಸಮಾವೇಶಗಳನ್ನು ಹಮ್ಮಿಕೊಳ್ಳುವುದು ಬೇಡ. ಅದರಿಂದ ಪಕ್ಷದ ಬಲವರ್ಧಿಸಿ ಎಂದು ಬಿಎಸ್​ವೈ ಸಭೆಯಲ್ಲಿ ಈಶ್ವರಪ್ಪ ಅವರಿಗೆ ಸೂಚಿಸಿದರು ಎಂದು ಹೇಳಲಾಗಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಈಶ್ವರಪ್ಪ, ನಾನೇನು ತಪ್ಪು ಮಾಡುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆಯೂ ಇದಲ್ಲ ಎಂದು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು ಎಂದು ತಿಳಿದುಬಂದಿದೆ.

ಆಗ ಮಧ್ಯ ಪ್ರವೇಶ ಮಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್, ಈ ಹಿಂದೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೊಷಣೆ ಮಾಡಿದ ಸಂದರ್ಭದಲ್ಲಿ ದೇಶದಲ್ಲಿ ನಮೋ ಬ್ರಿಗೇಡ್ ಸ್ಥಾಪನೆಯಾಯಿತು. ಆಗ ಬಿಜೆಪಿ ನಾಯಕರು ಆ ಸಂಘಟನೆಯನ್ನು ಬೆಂಬಲಿಸಿದರು. ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದಾದರೆ ಸಂಘಟನೆಯನ್ನು ಬೆಂಬಲಿಸುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ಈಶ್ವರಪ್ಪ ಪರ ಬ್ಯಾಟಿಂಗ್ ಮಾಡಿದರು.

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಆರಂಭದಲ್ಲಿಯೇ ಪಕ್ಷದ ಪದಾಧಿಕಾರಿಗಳ ನೇಮಕಾತಿಯಲ್ಲಿ ಅಪಸ್ವರಗಳು ಕೇಳಿ ಬರುತ್ತಿವೆ. ಏನೇ ವ್ಯತ್ಯಾಸಗಳಾಗಿದ್ದರೂ ಅವುಗಳನ್ನು ಈಗಲೇ ಸರಿಪಡಿಸಿಕೊಳ್ಳಬೇಕು. ಅದರಲ್ಲಿಯೇ ಪಕ್ಷದ ಹಿತ ಅಡಗಿದೆ ಎಂದು ಸಲಹೆ ನೀಡಿದರೆಂದು ಹೇಳಲಾಗಿದೆ. ಪಕ್ಷದ ಮುಖಂಡರ ಈ ಒತ್ತಾಯಕ್ಕೆ ಮಣಿಯದ ಬಿಎಸ್​ವೈ, ಪದಾಧಿಕಾರಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅದು ಮುಗಿದ ಅಧ್ಯಾಯ. ಈ ವಿಷಯವನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com